ದ.ಕ.: ಶಾಲಾ ಮಧ್ಯಂತರ ರಜೆಯಲ್ಲಿ ಮಾರ್ಪಾಡು

Update: 2018-09-04 14:11 GMT

ಮಂಗಳೂರು, ಸೆ.4: ದ.ಕ. ಜಿಲ್ಲೆಯಲ್ಲಿ ಅಧಿಕ ಮಳೆಯ ಕಾರಣ ಹಲವು ಬಾರಿ ರಜೆ ಘೋಷಿಸಲಾಗಿತ್ತು. ಶೈಕ್ಷಣಿಕ ಶಾಲಾ ಕರ್ತವ್ಯದ ಅವಧಿಗಳು ಕಡಿಮೆಯಾಗದಂತೆ ಸರಿದೂಗಿಸಬೇಕು ಆದ್ದರಿಂದ ಮುಂದಿನ ರಜಾ ದಿನಗಳಲ್ಲಿ ತರಗತಿ ನಡೆಸುವಂತೆ ಮಧ್ಯಂತರ ರಜೆಗಳನ್ನು ಮಾರ್ಪಾಡುಗೊಳಿಸಲು ಜಿಪಂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶಿಸಿದ್ದಾರೆ.

2018-19ನೇ ಸಾಲಿನ ಶೈಕ್ಷಣಿಕ ಅವಧಿಯ ಮಧ್ಯಂತರ ರಜೆಯನ್ನು ಅಕ್ಟೋಬರ್ 7ರಿಂದ 21ರವರೆಗೆ ಹೊರಡಿಸಲಾಗಿತ್ತು. ಈ ಆದೇಶವನ್ನು ಮಾರ್ಪಾಡಿಸಿರುವ ಇಲಾಖೆಯು, ಅಕ್ಟೋಬರ್ 14ರಿಂದ 21ರವರೆಗೆ ಮಧ್ಯಂತರ ರಜೆಯಾಗಿ ಮರು ನಿಗದಿಪಡಿಸಿ ಆದೇಶಿಸಿದೆ.

ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮೇ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ಅಧಿಕ ಮಳೆ ಇರುವ ದಿನಗಳಂದು ಹವಾಮಾನ ಮುನ್ಸೂಚನೆ ಆಧರಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ  ಒಂಬತ್ತು ದಿನಗಳ ರಜೆಯನ್ನು ಜಿಲ್ಲಾಧಿಕಾರಿ ಘೋಷಿಸಿ ಆದೇಶಿಸಿದ್ದರು. ಅಲ್ಲದೆ, ಸುಳ್ಯ, ಪುತ್ತೂರು, ಬಂಟ್ವಾಳ ವಲಯಗಳಲ್ಲಿ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತಾಲೂಕು ಹಂತದಲ್ಲಿ ಕೆಲವು ರಜೆಗಳನ್ನು ಘೋಷಿಸಲಾಗಿತ್ತು.

ಇನ್ನೂ ಹೆಚ್ಚಾಗಿ ಕೊರತೆ ಬೀಳುವ ಶಾಲಾ ಶೈಕ್ಷಣಿಕ ಕರ್ತವ್ಯದ ಅವಧಿಗಳು ಇದ್ದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ನಷ್ಟವಾಗದಂತೆ ಶಾಲಾ ಹಂತದಲ್ಲಿ ಶನಿವಾರದಂದು ಪೂರ್ಣ ದಿನವನ್ನಾಗಿ ಮತ್ತು ಶಾಲಾ ದಿನದಲ್ಲಿ ನಿಗದಿಯಾಗಿರುವ ಸ್ಥಳೀಯ ರಜೆಯನ್ನು ಕಡಿಮೆ ಮಾಡಿಕೊಂಡು ಸರಿದೂಗಿಸಿಕೊಳ್ಳುವ ಕುರಿತು ಪ್ರತಿ ಶಾಲಾ ಹಂತದಲ್ಲಿ ಯೋಜನೆಯನ್ನು ರೂಪಿಸಬಹುದಾಗಿದೆ.

ಮಧ್ಯಾವಧಿ ಪರೀಕ್ಷೆಗಳನ್ನು ಅಕ್ಟೋಬರ್ 7ರಿಂದ 14ರ ನಡುವಿನ ಮರು ಹೊಂದಾಣಿಕೆಯ ಕರ್ತವ್ಯದ ದಿನಗಳನ್ನು (ಒಟ್ಟು 5 ದಿನಗಳು) ಒಳಗೊಂಡಂತೆ ವೇಳಾಪಟ್ಟಿಯನ್ನು ಶಾಲಾ ಹಂತದಲ್ಲಿ ಯೋಜನೆ ತಯಾರಿಸಿ ಕ್ರಮ ಕೈಗೊಳ್ಳಬೇಕು. ಸೆಪ್ಟಂಬರ್ ಪೂರ್ಣ ತಿಂಗಳಲ್ಲಿ ತರಗತಿ/ ಪಾಠ ಬೋಧನೆಗೆ ಬಳಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News