ಏಷ್ಯಾಡ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಪೂವಮ್ಮ ಮಂಗಳೂರಿಗೆ

Update: 2018-09-06 11:17 GMT

ಮಂಗಳೂರು, ಸೆ.6: ಇಂಡೋನೇಶಿಯಾದ ಜಕಾರ್ತದಲ್ಲಿ ಇತ್ತೀಚೆಗೆ ಕೊನೆಗೊಂಡ 18ನೆ ಏಷ್ಯನ್ ಕ್ರೀಡಾಕೂಟದಲ್ಲಿ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಮಿಶ್ರ ರಿಲೇಯಲ್ಲಿ ಬೆಳ್ಳಿ ಪದಕ ಪಡೆದಿರುವ ಭಾರತೀಯ ತಂಡದ ಪ್ರಮುಖ ಓಟಗಾರ್ತಿ ಎಂ.ಆರ್. ಪೂವಮ್ಮ ಅವರಿಂದು ತವರಿಗೆ ಆಗಮಿಸಿದ್ದು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ದ.ಕ. ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಶ್ರಯದಲ್ಲಿ ನಡೆದ ಸ್ವಾಗತ ಸಂದರ್ಭ ಶಾಸ ವೇದ ವ್ಯಾಸ ಕಾಮತ್, ಮಾಜಿ ಸಚಿವ ಅಭಯಚಂದ್ರ ಜೈನ್, ಮನಪಾ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ರೂಪಾ ಡಿ. ಬಂಗೇರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಭಂಡಾರಿ ಹಾಗೂ ಪೂವಮ್ಮ ಅವರ ಪೋಷಕರು, ಕ್ರೀಡಾ ತರಬೇತುದಾರರು, ಕ್ರೀಡಾಧಿಕಾರಿ ಪ್ರದೀಪ್ ಡಿಸೋಜಾ ಈ ಸಂದರ್ಭ ಉಪಸ್ಥಿತರಿದ್ದು, ಅಭಿನಂದಿಸಿದರು.

ಪೋಷಕರು - ಕೊಡಗಿಗೆ ಪದಕ ಅರ್ಪಣೆ: ಎಂ.ಆರ್. ಪೂವಮ್ಮ

‘‘ನನ್ನ ಪೋಷಕರ ಪ್ರೋತ್ಸಾಹ, ಬೆಂಬಲದಿಂದಾಗಿಯೇ ನಾನು ಇಂದು ಈ ಸಾಧನೆ ಮಾಡಲು ಸಾಧ್ಯವಾಗಿದೆ. ಅದಕ್ಕಾಗಿ ಪ್ರಥಮವಾಗಿ ನನ್ನ ಈ ಪದಕಗಳು ಪೋಷಕರು ಮತ್ತು ಈ ಬಾರಿ ಕೊಡಗು ಭಾರೀ ಜಲಪ್ರಳಯಕ್ಕೆ ತುತ್ತಾಗಿರುವುದರಿಂದ ಅಲ್ಲಿಯ ಜನರಿಗೆ ಅರ್ಪಿಸುತ್ತೇನೆ’’ ಎಂದು ಅವರು ಪ್ರತಿಕ್ರಿಯಿಸಿದರು.
‘‘ತವರಿನ ಸ್ವಾಗತಕ್ಕೆ ತುಂಬಾ ಖುಷಿಯಾಗುತ್ತಿದೆ. 2014ರಲ್ಲಿಯೂ ಇದೇ ರೀತಿಯಾದ ಸ್ವಾಗತ ದೊರಕಿತ್ತು. ಇನ್ನು ಮುಂದಿನ ವರ್ಷ ಏಷ್ಯನ್ ಚಾಂಪಿಯನ್‌ಶಿಪ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗೆ ತಯಾರಿ ಆಗಬೇಕಾಗಿದೆ. ತಯಾರಿಗೆ ಶಿಬಿರ ಮುಂದಿನ ಅಕ್ಟೋಬರ್‌ನಲ್ಲಿ ನಿರ್ಧಾರವಾಗಲಿದೆ. 2020ರಲ್ಲಿ ಒಲಿಪಿಂಕ್ಸ್‌ನಲ್ಲಿ ಭಾಗವಹಿಸುವ ಇರಾದೆ ಇದೆ. ಅದಕ್ಕಾಗಿ ಮುಂದಿನ ವರ್ಷದಿಂದ ತರಬೇತಿ ಆರಂಭವಾಗಲಿದೆ’’ ಎಂದು ಪೂವಮ್ಮ ತಿಳಿಸಿದರು.

‘‘ನಿನ್ನೆ ಪ್ರಧಾನಿ ಹಾಗೂ ಕ್ರೀಡಾ ಸಚಿವರನ್ನು ಭೇಟಿಯಾಗಿದ್ದು ಅವರು ಸಾಕಷ್ಟು ಪ್ರೋತ್ಸಾಹ ನೀಡಿದ್ದು, ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ’’ ಎಂದು ಅವರು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News