ಕದಂ ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೋರಿದ್ದಾರೆ, ವಿವಾದ ಅಂತ್ಯಗೊಳಿಸಿ: ಚಂದ್ರಕಾಂತ್ ಪಾಟೀಲ್
ಮುಂಬೈ, ಸೆ. 7: ಕ್ಷಮೆ ಕೋರಿರುವುದರಿಂದ ರಾಮ್ ಕದಂ ಅವರು ಮಹಿಳೆಯರ ವಿರುದ್ಧ ನೀಡಿದ ಹೇಳಿಕೆಯ ಕುರಿತ ವಿವಾದವನ್ನು ಇಲ್ಲಿಗೆ ಅಂತ್ಯಗೊಳಿಸಬೇಕು ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರದ ಸಚಿವ ಚಂದ್ರಕಾಂತ್ ಪಾಟೀಲ್ ಶುಕ್ರವಾರ ಹೇಳಿದ್ದಾರೆ.
ಮಾತನಾಡುವಾಗ ಎಚ್ಚರ ವಹಿಸಬೇಕು ಎಂದು ಪಾಟಿಲ್ ಜನಪ್ರತಿನಿಧಿಗಳಿಗೆ ಸಲಹೆ ನೀಡಿದ್ದಾರೆ. ರಾಮ್ ಕದಂ ಅವರು ಕ್ಷಮೆ ಕೋರಿದ್ದಾರೆ. ಈ ವಿವಾದವನ್ನು ಇಲ್ಲಿಗೆ ಮುಗಿಸಬೇಕು. ಮಹಿಳೆಯರ ಬಗ್ಗೆ ಕದಂ ಅವರು ಎಂದೂ ಅಗೌರದಿಂದ ಮಾತನಾಡಿಲ್ಲ. ಇದಲ್ಲದೆ ಅವರು ಮಹಿಳೆಯರಿಗೆ ಸಾಕಷ್ಟು ನೆರೆವು ನೀಡಿದ್ದಾರೆ. ಅವರ ಕ್ಷೇತ್ರದ ಸಾವಿರಾರು ಮಹಿಳೆಯರು ಪ್ರತಿ ವರ್ಷ ಅವರಿಗೆ ರಾಕಿ ಕಟ್ಟುತ್ತಾರೆ ಎಂದು ಅವರು ಹೇಳಿದ್ದಾರೆ. ಮಾತನಾಡುವಾಗ ಜನಪ್ರತಿನಿಧಿಗಳು ಎಚ್ಚರ ವಹಿಸಬೇಕು. ಮಾತನಾಡುವ ಮೊದಲು ಪ್ರತಿ ವಾಕ್ಯವನ್ನು ಸರಿಯಾಗಿ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಅವರು ಹೇಳಿರುವುದರ ನಿಜವಾದ ಅರ್ಥವನ್ನು ಪ್ರದರ್ಶಿಸಲು ಸುದ್ದಿವಾಹಿನಿಗಳು ಪ್ರಯತ್ನಿಸಬೇಕು ಎಂದು ಕೂಡ ಪಾಟೀಲ್ ಹೇಳಿದರು.