ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಮೊಂತಿ ಫೆಸ್ತ್ ಆಚರಣೆ

Update: 2018-09-08 12:53 GMT

ಉಡುಪಿ, ಸೆ.8: ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ತ್ ಅಥವಾ ತೆನೆ ಹಬ್ಬವನ್ನು ಇಂದು ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಹಬ್ಬದ ಪ್ರಯುಕ್ತ ಶಂಕರಪುರದ ಸಂತ ಯೋಹಾನ್ನರ ದೇವಾಲಯದಲ್ಲಿ ಉಡುಪಿ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರಗಿದವು. ಈ ಸಂದರ್ಭ ಚರ್ಚಿನ ಪ್ರಧಾನ ಧರ್ಮಗುರು ವಂ.ಫರ್ಡಿನಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ವಂ. ರೋಯ್ಸನ್ ಫೆರ್ನಾಂಡಿಸ್, ವಂ.ರೋಮಿಯೊ ಲೂವಿಸ್, ವಂ.ಲೋರೆನ್ಸ್ ಮೆಂಡೋನ್ಸ, ವಂ.ಜಿತೇಶ್ ಕ್ಯಾಸ್ತೆಲಿನೊ ಉಪಸ್ಥಿತರಿದ್ದರು.

ಉಡುಪಿ ಶೋಕ ಮಾತಾ ಇಗರ್ಜಿಯಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂ.ವಲೇರಿಯನ್ ಮೆಂಡೊನ್ಸಾ ಹೊಸ ತೆನೆಗಳನ್ನು ಆಶೀರ್ವಚಿಸಿ ಹಬ್ಬದ ಸಂದೇಶವನ್ನು ನೀಡಿದರು. ಈ ವೇಳೆ ಸಹಾಯಕ ಧರ್ಮಗುರು ವಂ.ವಿಜಯ್ ಡಿಸೋಜ, ವಂ.ವಿಲಿಯಂ ಮಾರ್ಟಿಸ್ ಉಪಸ್ಥಿತರಿದ್ದರು.

ಪುಟಾಣಿಗಳು ಕನ್ಯಾಮರಿಯಮ್ಮನವರ ಪ್ರತಿಮೆಗೆ ಹೂಗಳನ್ನು ಸಮರ್ಪಿಸಿ ದರು. ಬಳಿಕ ಜಿಲ್ಲೆಯ ಎಲ್ಲ ಚರ್ಚ್‌ಗಳ ಧರ್ಮಗುರುಗಳು, ಆಯಾ ಊರಿನ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಯನ್ನು ಆಶೀರ್ವ ದಿಸಿ ಮೆರವಣಿಗೆಯಲ್ಲಿ ಚರ್ಚಿನ ಒಳಗೆ ಕೊಂಡೊಯ್ದು ಪವಿತ್ರ ಬಲಿಪೂಜೆ ನೆರವೇರಿಸಿದರು. ಪವಿತ್ರ ಬಲಿಪೂಜೆಯಲ್ಲಿ ಧರ್ಮಗುರುಗಳು ಕುಟುಂಬ ಜೀವನ ಹಾಗೂ ಮಹಿಳೆಯ ಸ್ಥಾನಮಾದ ಕುರಿತು ಪ್ರವಚನ ನೀಡಿದರು.

ಈ ಬಾರಿ ಕೊಡಗು ಮತ್ತು ಕೇರಳದಲ್ಲಿ ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗಾಗಿ ವಿಶೇಷ ಪ್ರಾರ್ಥನೆಯಲ್ಲಿ ಕೂಡ ಸಲ್ಲಿಸಲಾಯಿತು. ಬಲಿ ಪೂಜೆಯ ಬಳಿಕ ಧರ್ಮಗುರುಗಳು ಪ್ರತಿ ಕುಟುಂಬಕ್ಕೆ ಆಶೀರ್ವದಿಸಿದ ಹೊಸ ಭತ್ತದ ತೆನೆಯನ್ನು ನೀಡಿ ಹರಸಿದರು. ಇದೇ ವೇಳೆ ಮಕ್ಕಳಿಗೆ ಸಿಹಿ ತಿಂಡಿ, ಕಬ್ಬುಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News