ಉಡುಪಿ ಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ
Update: 2018-09-09 14:41 GMT
ಉಡುಪಿ, ಸೆ.9: ಲೋಕ ಕಲ್ಯಾಣಾರ್ಥ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಕೃಷ್ಣನಿಗೆ ರವಿವಾರ ಕೋಟಿ ತುಳಸಿ ಅರ್ಚನೆ ನಡೆಯಿತು. ಪರ್ಯಾಯ ಪಲಿಮಾರು ಮಠವು, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ಶ್ರೀಕೃಷ್ಣ ಮಠದ ಕೋಟಿ ತುಲಸ್ಯಾರ್ಚನಾ ಸಮಿತಿಗಳ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಪರ್ಯಾಯ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು, ಅದಮಾರು ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ತುಳಸಿ ಅರ್ಚನೆ ನಡೆಸಿದರು.
ಇದೇ ಸಂದರ್ಭದಲ್ಲಿ ಸಹಸ್ರಾರು ಮಂದಿ ವಿಪ್ರರು ವಿಷ್ಣು ಸಹಸ್ರ ನಾಮಾವಳಿ ಯ ಪಠಣ ಮಾಡಿದರೆ, ಮಹಿಳೆಯರು ಲಕ್ಷ್ಮಿ ಶೋಭಾನೆ ಹಾಡಿದರು.
ಪಲಿಮಾರು ಶ್ರೀಗಳ ಪರ್ಯಾಯಾವಧಿಯುದ್ದಕ್ಕೂ ಈಗ ಪ್ರತಿನಿತ್ಯ ಲಕ್ಷ ತುಳಸಿ ಅರ್ಚನೆ ನಡೆಯುತ್ತಿದೆ.