ನಿರುದ್ಯೋಗಿ, ಹತಾಶ ಯುವಕರಿಂದ ಅತ್ಯಾಚಾರ: ಬಿಜೆಪಿ ಶಾಸಕಿ

Update: 2018-09-16 08:07 GMT

ಚಂಡೀಗಢ, ಸೆ.16: ತಮ್ಮ ಭವಿಷ್ಯದ ಬಗ್ಗೆ ಹತಾಶರಾದ ನಿರುದ್ಯೋಗಿ ಯುವಕರು ಅತ್ಯಾಚಾರದಂತಹ ಅಪರಾಧ ಎಸಗುತ್ತಾರೆ ಎಂದು ಬಿಜೆಪಿ ಶಾಸಕಿ ಪ್ರೇಮಲತಾ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಶಾಸಕಿಯ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

"ಯುವಕರ ಮನಸ್ಸನ್ನು ಘಾಸಿಗೊಳಿಸುವ ಹತಾಶೆಯು ಅತ್ಯಾಚಾರದಂತಹ ಘಟನೆಗಳಿಗೆ ಮುಖ್ಯ ಕಾರಣ. ಯುವಕರು ಹತಾಶರಾಗಿದ್ದಾರೆ. ನಿರುದ್ಯೋಗಿಗಳಾಗಿದ್ದಾರೆ ಹಾಗೂ ಭವಿಷ್ಯದ ಬಗ್ಗೆ ಖಾತರಿ ಇಲ್ಲದ ಕಾರಣ ಇಂತಹ ಹೇಯ ಕೃತ್ಯ ಎಸಗುತ್ತಿದ್ದಾರೆ” ಎಂದು ಉಚಾನಾ ಕಲನ್ ಕ್ಷೇತ್ರದ ಶಾಸಕಿ ಅಭಿಪ್ರಾಯಪಟ್ಟಿದ್ದಾರೆ.

"ನಮ್ಮ ಸಮಾಜದಲ್ಲಿ ಕೆಟ್ಟ ಸಂಪ್ರದಾಯ ಆರಂಭವಾಗಿದೆ. ಮಹಿಳೆಯನ್ನು ಎಲ್ಲಿ ನೋಡಿದರೂ ಪುರುಷರು ಕೆಟ್ಟ ದೃಷ್ಟಿಯಿಂದಲೇ ನೋಡುತ್ತಾರೆ" ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಬೀರೇಂದ್ರ ಸಿಂಗ್ ಅವರ ಪತ್ನಿಯಾಗಿರುವ ಇವರು, ಹರ್ಯಾಣದ ರೇವಾರಿ ನಗರದಲ್ಲಿ 19 ವರ್ಷದ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನು ಹಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಕಟುವಾಗಿ ಟೀಕಿಸಿದ್ದಾರೆ. ಸಿಬಿಎಸ್‍ಇ ಟಾಪರ್ ಆಗಿದ್ದ 19 ವರ್ಷದ ಪದವಿ ವಿದ್ಯಾರ್ಥಿನಿಯನ್ನು ಅಪಹರಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News