"ಇತರ ಮಕ್ಕಳನ್ನು ಬಿಟ್ಟು ನನ್ನನ್ನು ಮಾತ್ರ ಮನೆಯ ಮಾಳಿಗೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ"

Update: 2018-09-20 04:57 GMT

ಸಂತ್ರಸ್ತೆ ಬಾಲಕಿಯ ದೂರಿನಲ್ಲಿ ಆಘಾತಕಾರಿ ಆರೋಪಗಳು 

ಬಂಟ್ವಾಳ, ಸೆ.20: ನನ್ನೊಂದಿಗಿದ್ದ ಇತರ ಮಕ್ಕಳನ್ನು ಬಿಟ್ಟು ನನ್ನನ್ನು ಮಾತ್ರ ಮನೆಯ ಮಾಳಿಗೆಗೆ ಹಾಗೂ ಹೊಸ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಧರಿಸಿದ್ದ ವಸ್ತ್ರವನ್ನು ಬಿಚ್ಚಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಬುಧವಾರ ಬೆಳಕಿಗೆ ಬಂದ ಗೂಡಿನಬಳಿ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಬಾಲಕಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾಳೆ.

ಈಕೆ  ತಾಲೂಕಿನ ಖಾಸಗಿ ಶಾಲೆಯೊಂದರ ನಾಲ್ಕನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.  

ಆರೋಪ ೧:
ಗೂಡಿನಬಳಿಯಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದ ವೇಳೆ ನೆರೆಕರೆಯ ಮಕ್ಕಳೊಂದಿಗೆ ಸೇರಿ ಅಲ್ಲೇ ಸಮೀಪದ ಅಬೂಬಕರ್ ಎಂಬವರ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರುವ ಅಂಬಾರಿ ರಝಾಕ್ ಎಂಬಾತನ ಮನೆಗೆ ಹೋಗಿದ್ದೆ. ಈ ವೇಳೆ ರಝಾಕ್  ಜೊತೆಗಿದ್ದ ಇತರ ಮಕ್ಕಳನ್ನು ಬಿಟ್ಟು ನನ್ನನ್ನು ಮಾತ್ರ ಮನೆಯ ಮಾಳಿಗೆಗೆ ಕರೆದುಕೊಂಡು ಹೋಗಿ ಧರಿಸಿದ್ದ ವಸ್ತ್ರವನ್ನು ಬಿಚ್ಚಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಸಂತ್ರಸ್ತೆ ಬಾಲಕಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾಳೆ.

ಆರೋಪ 2:
ಇದಲ್ಲದೆ ಅಲ್ಲೇ ಪಕ್ಕದ ನಿವಾಸಿ ಗುಜರಿ ವ್ಯಾಪಾರಿ ಶೇಕಬ್ಬ ಎಂಬಾತ ಗುಜರಿ ತೆಗೆಯಲಿಕ್ಕಿದೆ ಎಂದು ಹೇಳಿ ಹೊಸ ಕಟ್ಟಡವೊಂದಕ್ಕೆ ಕರೆದುಕೊಂಡು ಹೋಗಿ ಆತನೂ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. 

ಆರೋಪ 3:
ಹಸನಬ್ಬ ಎಂಬವರ ಪುತ್ರ ಹೊಟೇಲ್ ಕಾರ್ಮಿಕ ನವಾಝ್ ಎಂಬಾತನು ನನ್ನನ್ನು ಹತ್ತಿರ ಕರೆದು ಆತನ ಜನನಾಂಗವನ್ನು ನನಗೆ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಸಂತ್ರಸ್ತೆ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.

ಯಾರಲ್ಲಾದರೂ ತಿಳಿಸಿದರೆ ಕೈ ಕಾಲು ಮುರಿಯುತ್ತೇವೆ

ದುಷ್ಕರ್ಮಿಗಳು ಅತ್ಯಾಚಾರ ಎಸಗಿದ ಬಳಿಕ ಯಾರಲ್ಲೂ ವಿಷಯ ತಿಳಿಸಿದಂತೆ ಬಾಲಕಿಯನ್ನು ಬೆದರಿಸಿದರೆನ್ನಲಾಗಿದೆ. ಈ ವಿಷಯವನ್ನು ಯಾರಲ್ಲಾದರೂ ತಿಳಿಸಿದರೆ ಹೊಡೆದು ಕೈ ಕಾಲು ಮುರಿದು ಹಾಕುತ್ತೇವೆ ಎಂಬಿತ್ಯಾದಿಯಾಗಿ ಆರೋಪಿಗಳಾದ ರಝಾಕ್ ಹಾಗೂ ಶೇಕಬ್ಬ ಬೆದರಿಕೆ ಒಡ್ಡಿದ್ದರು ಎಂದು ಸಂತ್ರಸ್ತ ಬಾಲಕಿ ಪೊಲೀಸರೊಂದಿಗೆ ಹೇಳಿಕೊಂಡಿದ್ದಾಳೆ.

ಬಾಲಕಿಯ ವರ್ತನೆಯಲ್ಲಿ ಬದಲಾವಣೆ:
ಇತ್ತೀಚೆಗೆ ಬಾಲಕಿಯ ವರ್ತನೆ ಹಾಗೂ ದೇಹದಲ್ಲಿ ಉಂಟಾದ ಕೆಲವೊಂದು ಬೆಳವಣಿಗೆಗಳನ್ನು ಗಮನಿಸಿ ಮನೆ ಮಂದಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಕೃತ್ಯಗಳು ಬೆಳಕಿಗೆ ಬಂದಿವೆ.

ಸೂಕ್ತ ಕ್ರಮ: ಬಂಟ್ವಾಳ ಎಸ್ಸೈ
ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆದಿರುವ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆಯ ಬಳಿಕ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಬಂಟ್ವಾಳ ನಗರ ಠಾಣಾ ಎಸ್ಸೈ ಚಂದ್ರಶೇಖರ್ ತಿಳಿಸಿದ್ದಾರೆ. 

ಮೂವರು ವಶಕ್ಕೆ:

ಬಾಲಕಿಯ ಹೇಳಿಕೆ ಪಡೆದುಕೊಂಡು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ  ಪೊಲೀಸರು ಮೂವರೂ ಆರೋಪಿಗಳನ್ನು ಬುಧವಾರ ರಾತ್ರಿ ವಶಕ್ಕೆ ಪಡೆಡಿದ್ದಾರೆ. 
ಗೂಡಿನಬಳಿಯ ನಿವಾಸಿ ಗುಜರಿ ವ್ಯಾಪಾರಿ ಶೇಕಬ್ಬ(65), ಬೇಕರಿ  ಸಾಮಗ್ರಿಗಳನ್ನು ಲೈನ್ ಸೇಲ್ ಮಾಡುವ ಅಂಬಾರಿ ಯಾನೆ ರಝಾಕ್ (35) ಹಾಗೂ ಹೊಟೇಲ್‌ ಕಾರ್ಮಿಕ ನವಾಝ್ (22)  ಪೊಲೀಸ್ ವಶದಲ್ಲಿರುವ ದೌರ್ಜನ್ಯ ಪ್ರಕರಣದ ದ ಆರೋಪಿಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News