ಕರ್ನಾಟಕ-ಗೋವಾ ಗಡಿಭಾಗದ ಅರಬ್ಬೀ ಸಮುದ್ರದಲ್ಲಿ 17 ಮೀನುಗಾರರ ರಕ್ಷಣೆ
Update: 2018-09-20 14:01 GMT
ಮಂಗಳೂರು, ಸೆ.20: ಕರ್ನಾಟಕ-ಗೋವಾ ಗಡಿಭಾಗದ ಅರಬ್ಬೀ ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿದ್ದ ಬೋಟೊಂದರಲ್ಲಿದ್ದ 17 ಮಂದಿ ಮೀನುಗಾರರನ್ನು ಭಾರತೀಯ ತಟರಕ್ಷಣಾ ಪಡೆಯು ಗುರುವಾರ ಮಧ್ಯಾಹ್ನ ರಕ್ಷಿಸಿದೆ.
ಮೀನುಗಾರಿಕೆಗೆ ತೆರಳಿದ್ದ ಯಶವರ್ಧನ್ ಎಂಬ ಹೆಸರಿನ ಬೋಟ್ ಅಪಾಯದಲ್ಲಿ ಸಿಲುಕಿತ್ತು. ಈ ಬೋಟ್ನಲ್ಲಿ ಒಟ್ಟು 25 ಮಂದಿ ಮೀನುಗಾರರಿದ್ದರು. ಮಾಹಿತಿ ತಿಳಿದ ತಕ್ಷಣ ತಟರಕ್ಷಣಾ ಪಡೆಯು ಮೀನುಗಾರರ ರಕ್ಷಣೆಗೆ ಧಾವಿಸಿತು. ಅಪಾಯದ ಸಿಲುಕಿದ ಬೋಟ್ನೊಳಗೆ ನೀರು ನುಗ್ಗಿದ್ದರಿಂದ ಮೀನುಗಾರರು ತೀವ್ರ ಆತಂಕಕ್ಕೀಡಾಗಿದ್ದರು. ಕಾರ್ಯಾಚರಣೆಗಿಳಿದ ತಟರಕ್ಷಣಾ ಪಡೆಯ ಸಿಬ್ಬಂದಿ ವರ್ಗವು 17 ಮಂದಿಯನ್ನು ರಕ್ಷಿಸಿದೆ. ಉಳಿದ ಮೀನುಗಾರರು ಮತ್ತು ತಟರಕ್ಷಣಾ ಪಡೆಯ ಐವರು ಸಿಬ್ಬಂದಿಗಳು ಬೋಟ್ನಲ್ಲೇ ಇದ್ದು, ನೀರನ್ನು ಹೊರಚೆಲ್ಲುವ ಪ್ರಯತ್ನ ಮುಂದುವರಿಸಿದ್ದಾರೆ.