ದಿಲ್ಲಿ ಗೆ 5 ವಿಕೆಟ್ ಗೆಲುವು

Update: 2018-09-20 18:27 GMT

ವಡೋದರ, ಸೆ.20: ಒತ್ತಡದಲ್ಲೂ ಅರ್ಧಶತಕ ಸಿಡಿಸಿದ ಯುವ ಆಟಗಾರ ಹಿಮ್ಮತ್ ಸಿಂಗ್ ಹಾಗೂ ಐದು ವಿಕೆಟ್ ಗೊಂಚಲು ಪಡೆದ ಮಧ್ಯಮ ವೇಗದ ಬೌಲರ್ ಸುಬೋಧ್ ಭಟ್(24ಕ್ಕೆ5)ಸಾಹಸದಿಂದ ದಿಲ್ಲಿ ತಂಡ ಸೌರಾಷ್ಟ್ರ ವಿರುದ್ಧ ವಿಜಯ್ ಹಝಾರೆ ಟ್ರೋಫಿಯ ‘ಬಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ 5 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದೆ.

ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ನಾಯಕ ಗೌತಮ್ ಗಂಭೀರ್ 48 ಎಸೆತಗಳಲ್ಲಿ 62 ರನ್ ಗಳಿಸಿ ದಿಲ್ಲಿ ತಂಡ 46 ಓವರ್‌ಗಳಲ್ಲಿ 238 ರನ್ ಗುರಿ ತಲುಪಲು ನೆರವಾದರು. ದಿಲ್ಲಿ ತಂಡ ಗಂಭೀರ್ ನೀಡಿದ್ದ ಉತ್ತಮ ಆರಂಭದ ಹೊರತಾಗಿಯೂ 152 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಜೊತೆಯಾದ ಹಿಮ್ಮತ್(74.93 ಎಸೆತ) ಹಾಗೂ ಲಲಿತ್ ಯಾದವ್(36,54 ಎಸೆತ)ಎಚ್ಚರಿಕೆಯ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

 ಉನ್ಮುಕ್ತ್ ಚಂದ್ ಹಾಗೂ ರಿಷಭ್ ಪಂತ್ ಅಲ್ಪ ಮೊತ್ತಕ್ಕೆ ಔಟಾದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಸೌರಾಷ್ಟ್ರ ಒಂದು ಹಂತದಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತ್ತು. ಆದರೆ, 4 ಓವರ್‌ಗಳಲ್ಲಿ 15 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡು 237 ರನ್‌ಗೆ ಆಲೌಟಾಯಿತು.

ಸೌರಾಷ್ಟ್ರದ ಪರ ಚೇತೇಶ್ವರ ಪೂಜಾರ 89 ಎಸೆತಗಳಲ್ಲಿ 53 ರನ್ ಗಳಿಸಿದರು. ಶೆಲ್ಡನ್ ಜಾಕ್ಸನ್ 78 ಎಸೆತಗಳಲ್ಲಿ 68 ರನ್ ಗಳಿಸಿದ್ದಾರೆ. ‘ಬಿ’ ಗುಂಪಿನ ಇತರ ಪಂದ್ಯಗಳಲ್ಲಿ ಛತ್ತೀಸ್‌ಗಢ ತಂಡ ಮಧ್ಯಪ್ರದೇಶವನ್ನು 122 ರನ್‌ಗಳಿಂದಲೂ, ಆಂಧ್ರ ತಂಡ ಒಡಿಶಾವನ್ನು 6 ವಿಕೆಟ್‌ಗಳಿಂದ ಸೋಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News