ಚಿಂತನೆಶೀಲತೆ, ಸೃಜನಾಶೀಲತೆಯಿಂದ ಕೂಡಿದ ಪಲ್ಲಟದ ಅವಶ್ಯಕತೆಯಿದೆ : ಡಾ. ಚಂದ್ರಶೇಖರ ದಾಮ್ಲೆ

Update: 2018-09-23 05:28 GMT

ಪುತ್ತೂರು,ಸೆ.20: ಕಾಲ ಬದಲಾದಂತೆ ಪಲ್ಲಟಗಳಾಗುವುದು ಸಹಜ. ಆದರೆ ಪ್ರಸ್ತುತ ಚಿಂತನೆಶೀಲತೆ, ಸೃಜನಾಶೀಲತೆಯಿಂದ ಕೂಡಿದ ಪಲ್ಲಟದ ಅವಶ್ಯಕತೆ ಇದೆ. ಇದನ್ನು ತರುವ ಶಕ್ತಿ ಯುವ ಸಮುದಾಯದ ಮೇಲಿದೆ ಎಂದು ಪತ್ರಕರ್ತ ಹಾಗೂ ಸ್ನೇಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಡಾ. ಚಂದ್ರಶೇಖರ ದಾಮ್ಲೆ ಹೇಳಿದರು.

ಅವರು ಗುರುವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದ ಜಿ.ಎಲ್. ಆಚಾರ್ಯ ಸಭಾಂಗಣದಲ್ಲಿ ಹಾಗೂ ಎನ್.ವಿ. ಮೂರ್ತಿ ವೇದಿಕೆಯಲ್ಲಿ ನಡೆದ ಪುತ್ತೂರು ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯುವ ಜನತೆ ಮತ್ತು ಕೌಟುಂಬಿಕ ಪಲ್ಲಟಗಳು ಕುರಿತಾದ ವಿಚಾರಗೋಷ್ಠಿಯಲ್ಲಿ ಕೌಟುಂಬಿಕ ಪಲ್ಲಟಗಳು ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಪ್ರಸ್ತುತ ಶಿಕ್ಷಣ, ಕೌಟುಂಬಿಕ ವಿಚಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಲ್ಲಟಗಳು ಆಗುತ್ತಿವೆ. ಮಕ್ಕಳು ಮನೆಯಲ್ಲಿ ಹೋಂವರ್ಕ್, ಶಾಲೆಗೆ ಬಂದಾಗ ಆಡುತ್ತಿರುತ್ತಾರೆ. ಇದು ಪಲ್ಲಟದ ವಿಚಾರವನ್ನು ತಿಳಿಸುತ್ತದೆ. ಕುಟುಂಬ ಎಂಬುವುದು ಸರ್ವೋದಯ ಮೂಲಬೀಜವಾಗಿದ್ದು, ಮಕ್ಕಳಿಗೆ ಪೋಷಕರು ಭಯ ಪಡುವ ಸನ್ನಿವೇಶ ನಿರ್ಮಾಣವಾಗಿದೆ. ಈಗ ಮಕ್ಕಳೇ ಯಜಮಾನರು ಎಂದು ಕೌಟುಂಬಿಕ ಪಲ್ಲಟದ ಕುರಿತು ವಿವರಿಸಿದರು.

ಗ್ರಾಮೀಣ ಬದುಕಿನ ಪಲ್ಲಟಗಳು ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗದ ನಿರ್ದೇಶಕಿ ಮನೋರಮಾ ಭಟ್ ಉಜಿರೆ, ಗ್ರಾಮೀಣ ಬದುಕು ಇಂದು ಪಲ್ಲಟವಾಗಿದೆ. ಗ್ರಾಮೀಣ ಭಾಗಗಳಲ್ಲಿ ಕೇವಲ ಋಣಾತ್ಮಕ ಪಲ್ಲಟಗಳನ್ನು ಮಾತ್ರವಲ್ಲದೆ ಧನಾತ್ಮಕ ಪಲ್ಲಟಗಳನ್ನು ಗುರುತಿಸಲು ಅವಕಾಶವಿದೆ. ಸ್ವದೇಶಿ ಕಲ್ಪನೆ ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಸಾಕಾಗದು. ಅದನ್ನು ಅನುಷ್ಠಾನಗೊಳಿಸುವಲ್ಲಿ ಯುವಜನತೆ ಮುಂದೆ ಬಂದಾಗ ಮಾತ್ರ ಗ್ರಾಮೀಣ ಬದುಕಿನಲ್ಲಿ ಸ್ವದೇಶಿ ಕಲ್ಪನೆಯ ಪಲ್ಲಟಗಳು ಧನಾತ್ಮಕವಾಗಿ ಇರಲು ಸಾಧ್ಯವಿದೆ. ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಕೂಡಾ ಬಹುರಾಷ್ಟ್ರೀಯ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಸ್ವದೇಶಿ ಕಲ್ಪನೆಗೆ ಹಿನ್ನಡೆಯಾಗುತ್ತಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿರಿ ಗ್ರಾಮೋದ್ಯೋಗವು ಗ್ರಾಮೀಣ ಜನರಲ್ಲಿ ಸ್ವದೇಶಿ ಕಲ್ಪನೆಯನ್ನು ಮೂಡಿಸಿದೆ. ಇದು ಗ್ರಾಮೀಣ ಭಾಗದ ಅಭ್ಯುಧಯಕ್ಕೆ ಕಾರಣವಾಗಿದೆ. ಖಾಸಗೀಕರಣ ಮತ್ತು ಕೈಗಾರೀಕರಣದ ಪ್ರಭಾವದಿಂದ ಗ್ರಾಮೀಣ ಬದುಕಿನಲ್ಲಿ ಪಲ್ಲಟಗಳು ತೀವ್ರವಾಗಿ ನಡೆದಿವೆ. ಹಸಿರು ಕ್ರಾಂತಿಯಿಂದ ಹಿಡಿದ ಕೈಗಾರೀಕರಣದವರೆಗೂ ಗ್ರಾಮೀಣ ಬದುಕಿನಲ್ಲಿ ಪಲ್ಲಟವಾಗಿದೆ. ಇವುಗಳಿಗೆ ಪರಿಹಾರವಾಗಿ ಸರಕಾರದ ನೀತಿಗಳಲ್ಲಿ ಬದಲಾಗಬೇಕಾಗಿದೆ. ರೈತರು ಬೆಳೆದ ಬೆಲೆಗೆ ಸ್ಥಿರ ಮಾರುಕಟ್ಟೆಯ ವ್ಯವಸ್ಥೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಮಾತನಾಡಿ, ಇಂದು ಬಾಹ್ಯ ಸಂಬಂಧಗಳು ಗಟ್ಟಿಯಾಗಿದ್ದು, ಅಂತರ್ ಸಂಬಂಧಗಳು ಕಡಿಮೆಯಾಗುತ್ತಿವೆ. ಆತ್ಮಬಂಧಗಳು, ಪ್ರೀತಿಗಳು ಕೌಟುಂಬಿಕ ವ್ಯಾಪ್ತಿಯಿಂದ ಮರೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಾವು ಆತ್ಮ ವಿಮರ್ಶೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ನಮ್ಮಲ್ಲಿ ಸಹಿಷ್ಣುತೆ ಕಡಿಮೆಯಾಗಿದ್ದು, ಸೌಕರ್ಯಗಳು, ಸೌಲಭ್ಯಗಳು ಹೆಚ್ಚಾದಂತೆ ನಿರಾಸೆ, ದುಃಖಗಳು ಹೆಚ್ಚಾಗುತ್ತವೆ. ಹಣ ಸಂಪಾದಿಸುವ ದಾವಂತದಲ್ಲಿ ಬದುಕಿನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಈ ನಿಟ್ಟಿನಲ್ಲಿ ಇಂದು ಬದುಕು ಕಲಿಸುವ ಪಾಠಶಾಲೆಗಳ ಅವಶ್ಯಕತೆ ಇದ್ದು, ಅಂತಹ ಪಾಠಶಾಲೆಗಳು ನಮ್ಮ ಮನೆಗಳಾಗಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಪೀಟರ್ ವಿಲ್ಸನ್ ಪ್ರಭಾಕರ್ ಮತ್ತು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ರೋಹಿಣಿ ಆಚಾರ್ಯ ಉಪಸ್ಥಿತರಿದ್ದರು. ಪ್ರೊ. ವತ್ಸಲಾ ರಾಜ್ಞಿ ಸ್ವಾಗತಿಸಿ, ಕವಯಿತ್ರಿ ಕವಿತಾ ಅಡೂರು ಸ್ವಾಗತಿಸಿದರು. ಉಪನ್ಯಾಸಕಿ ಭವ್ಯಾ ಆರ್. ನಿಡ್ಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News