ಬಾಲಕಿ ಲೈಂಗಿಕ ದೌರ್ಜನ್ಯ ಹೇಯ ಕೃತ್ಯ: ಶಾಸಕ ರಾಜೇಶ್ ನಾಯ್ಕ್

Update: 2018-09-21 12:53 GMT

ಬಂಟ್ವಾಳ, ಸೆ. 21: ಬಿ.ಸಿ.ರೋಡಿನ ಗೂಡಿನಬಳಿ ಎಂಬಲ್ಲಿ ಬಾಲಕಿಯೊಬ್ಬಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ದೇವರ ಮೇಲೆ ನಡೆಸಿದ ಅತ್ಯಾಚಾರ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.

ಬಿ.ಸಿ.ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃತ್ಯವೆಸಗಿದ ಆರೋಪಿಗಳು ಮನುಷ್ಯರೇ ಅಲ್ಲ, ಪಶುಸಮಾನರಂತೆ ವರ್ತಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುವುದಾಗಿ ಹೇಳಿದರು. 

ಬಾಲಕಿ ಇದ್ದ ಆಸ್ಪತ್ರೆಗೆ ತೆರಳಿ ಆರೋಗ್ಯ ವೀಕ್ಷಿಸಿದ್ದಾಗಿ ಹೇಳಿದರು.

ಮಕ್ಕಳ ಪೋಷಕರು ಜಾಗೃತರಾಗಿ: ಬಿಜೆಪಿ 
ಪಾಣೆಮಂಗಳೂರು ಗೂಡಿನ ಬಳಿ ಎಂಬಲ್ಲಿ ನಾಲ್ಕನೆ ತರಗತಿಯ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಬಂಟ್ವಾಳ ಕ್ಷೇತ್ರ ಬಿಜೆಪಿಯು ಖಂಡಿಸಿ ಬಂಧಿತ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ. 

ಮುಗ್ಧ ಮಗುವಿನ ಮುಗ್ಧತೆಯನ್ನು ಬಲಿಕೊಡಲು ಪ್ರಯತ್ನಿಸಿರುವುದು ಸಂಸ್ಕಾರವಂತ ನಾಗರಿಕರು ತಲೆತಗ್ಗಿಸುವಂತಾಗಿದೆ. ಇಂತಹ ಹೇಯ ಕೃತ್ಯ ಖಂಡನಾರ್ಹ ಮಾತ್ರವಲ್ಲ ದಂಡನಾರ್ಹವೂ ಆಗಿದೆ. ಮುಂದಕ್ಕೆ ಇಂತಹ ಘಟನೆ ಮರುಕಳಿಸದಂತೆ ಮಕ್ಕಳ ಪೋಷಕರು ಜಾಗೃತರಾಗಿರುವುದು ಉತ್ತಮ. ಅಕ್ಷಮ್ಯ ಅಪರಾಧಕ್ಕೆ ಶಿಕ್ಷೆಯೇ ಸೂಕ್ತ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ್ ಶೆಟ್ಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News