ಮೂಡುಬಿದಿರೆ: ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಯ ಕೊಲೆ ಯತ್ನ

Update: 2018-09-24 05:25 GMT

ಮೂಡುಬಿದಿರೆ, ಸೆ.24: ಯುವಕನೋರ್ವನ ಮೇಲೆ ತಂಡವೊಂದು ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಇಂದು ಬೆಳಗ್ಗೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಗಂಟಾಲ್‌ಕಟ್ಟೆ ಎಂಬಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಇಮ್ತಿಯಾಝ್(32) ಕೊಲೆ ಯತ್ನಕ್ಕೊಳಗಾದ ಯುವಕ. ಈತ 2015ರಲ್ಲಿ ಮೂಡುಬಿದಿರೆಯಲ್ಲಿ ನಡೆದ ಸಂಘ ಪರಿವಾರದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಆರೋಪಿ ಎಂದು ಹೇಳಲಾಗಿದೆ.

ಇವರು ಗಂಟಾಲ್‌ಕಟ್ಟೆ ಮಸೀದಿಯ ಕಟ್ಟಡವೊಂದರಲ್ಲಿ ಸಣ್ಣ ಹೋಟೆಲ್ ನಡೆಸುತ್ತಿದ್ದಾರೆ. ಎಂದಿನಂತೆ ಇಂದು ಬೆಳಗ್ಗೆ ಇಮ್ತಿಯಾಝ್ ಹೊಟೇಲ್‌ನಲ್ಲಿದ್ದ ವೇಳೆ 8 ಮಂದಿಯ ತಂಡ ಆಗಮಿಸಿ ಈ ಕ್ಯತ್ಯ ಎಸಗಿದೆ ಎಂದು ತಿಳಿದುಬಂದಿದೆ. ದುಷ್ಕರ್ಮಿಗಳ ತಂಡವು ಹೋಟೆಲ್‌ನಲ್ಲಿ ಕುಳಿತು ಇಮ್ತಿಯಾಝ್ ಅವರಲ್ಲಿ ಚಹಾ ಕೇಳಿದೆ. ಅದರಂತೆ ಚಹಾ ಮಾಡಲು ಅವರು ಹೊಟೇಲ್ ಒಳಗೆ ಹೋಗುತ್ತಿದ್ದಂತೆ ಹಿಂದಿನಿಂದ ತಲಾವರು ದಾಳಿ ನಡೆಸಿದೆ. ಇದರಿಂದ ಇಮ್ತಿಯಾಝ್‌ರ ತಲೆ, ಕೈ ಹಾಗೂ ಬೆನ್ನಿಗೆ ಗಾಯಗಳಾಗಿವೆ.

ಬಳಿಕ ಅವರು ಹೋಟೇಲ್ ಹಿಂಬಾಗಿಲಿನಿಂದ ಓಡಿ ಸಮೀಪದ ಮನೆಯೊಂದಕ್ಕೆ ನುಗ್ಗಿ ದುಷ್ಕರ್ಮಿಗಳಿಂದ ಪಾರಾಗಿದ್ದಾರೆ. ಗಂಭೀರ ಗಾಯಗೊಂಡಿರುವ ಇಮ್ತಿಯಾಝ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಮ್ತಿಯಾಝ್ ಅವರ ಮೇಲೆ ದಾಳಿ ನಡೆಯುತ್ತಿದ್ದ ವೇಳೆ ಹೋಟೆಲ್‌ನಲ್ಲಿದ್ದ ಇನ್ನೋರ್ವ ವ್ಯಕ್ತಿ ತಡೆಯಲು ಯತ್ನಿಸಿದಾಗ ತಂಡವು ಅವರ ಮೇಲೂ ದಾಳಿ ನಡೆಸಿದೆ. ಇದರಿಂದ ಗಾಯಗೊಂಡಿರುವ ಆ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News