20 ವರ್ಷಗಳಿಂದ ಪಕ್ಷಕ್ಕೆ ನಿಷ್ಠನಾಗಿದ್ದಕ್ಕೆ ಸಿಕ್ಕ ಉಡುಗೊರೆ

Update: 2018-09-24 16:56 GMT

ಪಣಜಿ, ಸೆ.24: ಮನೋಹರ್ ಪಾರಿಕ್ಕರ್ ನೇತೃತ್ವದ ಗೋವಾ ಸಚಿವ ಸಂಪುಟದಿಂದ ತಮ್ಮನ್ನು ಕೈಬಿಟ್ಟ ಬಗ್ಗೆ ಬಿಜೆಪಿ ಶಾಸಕ ಫ್ರಾನ್ಸಿಸ್ ಡಿಸೋಜ ತೀವ್ರ ಅಸಮಾಧಾನ ಹೊರಗೆಡವಿದ್ದಾರೆ. 20 ವರ್ಷಗಳಿಂದ ಪಕ್ಷಕ್ಕೆ ನಿಷ್ಠನಾಗಿದ್ದಕ್ಕೆ ಪಕ್ಷ ನೀಡಿದ ಉಡುಗೊರೆ ಇದು ಎಂದು ಕಿಡಿ ಕಾರಿದ್ದಾರೆ.

ಪಾರಿಕ್ಕರ್ ಅವರು ಸೋಮವಾರ ಸಂಪುಟ ಸಹೋದ್ಯೋಗಿಗಳಾಗಿದ್ದ ಡಿಸೋಜ ಹಾಗೂ ಪಾಂಡುರಂಗ ಮಡಕಾಯಿಕರ್ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದರು. ಅನಾರೋಗ್ಯಪೀಡಿತರಾಗಿರುವ ಇಬ್ಬರೂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

"20 ವರ್ಷದ ಪಕ್ಷನಿಷ್ಠೆಗೆ ನನಗೆ ಸಂದ ಪ್ರತಿಫಲ ಇದು" ಎಂದು ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಪಿಟಿಐಗೆ ತಿಳಿಸಿದ್ದಾರೆ. ಉತ್ತರ ಗೋವಾದ ಮಪೂಸಾ ಕ್ಷೇತ್ರದಿಂದ ಎರಡು ದಶಕಗಳಿಂದ ಅವರು ಬಿಜೆಪಿ ಟಿಕೆಟ್‍ನಲ್ಲಿ ಗೆಲ್ಲುತ್ತಿದ್ದಾರೆ. ಸಂಪುಟದಿಂದ ಕೈಬಿಡುವ ಮುನ್ನ ಸೌಜನ್ಯಕ್ಕಾದರೂ ವಿಷಯವನ್ನೂ ತಿಳಿಸಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

"ನಿನ್ನೆ ಸಂಜೆ ಕೂಡಾ ಸಿಎಂ ಬಳಿ ಚರ್ಚಿಸಿದ್ದೆ. ಆದರೆ ಈ ಬಗ್ಗೆ ಅವರು ಸುಳಿವು ಕೂಡಾ ನೀಡಲಿಲ್ಲ. ಸಂಪುಟದಿಂದ ಕೈಬಿಟ್ಟ ವಿಚಾರ ತಿಳಿದ ಬಳಿಕ ಅವರಿಗೆ ಕರೆ ಮಾಡಿದಾಗ, ಪಕ್ಷದ ಹೈಕಮಾಂಡ್ ನಿರ್ಧಾರ ಎಂದು ಅವರು ತಿಳಿಸಿದರು" ಎಂದು ನಗರಾಭಿವೃದ್ಧಿ ಖಾತೆ ನಿಭಾಯಿಸುತ್ತಿದ್ದ ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News