ದೇವಸ್ಥಾನದ ಸಮೀಪ ಮೀನು ಹಿಡಿದ ಯುವಕನ ಥಳಿಸಿ ಹತ್ಯೆ

Update: 2018-09-26 08:42 GMT

ರಾಜಸ್ಥಾನ, ಸೆ.26: ದೇವಸ್ಥಾನದ ಸಮೀಪ ಮೀನುಹಿಡಿಯುತ್ತಿದ್ದ ಯುವಕನೋರ್ವನನ್ನು ಗುಂಪೊಂದು ಥಳಿಸಿ ಕೊಂದಿರುವ ಘಟನೆ ರಾಜಸ್ಥಾನದ ಚಿತ್ತೋರ್ ಘರ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ರೂಪರೇಲ್ ನದಿ ತೀರದಲ್ಲಿರುವ ದೇವಸ್ಥಾನದ ಸಮೀಪ ಮೀನು ಹಿಡಿದಿದ್ದಾನೆ ಹಾಗು ದೇವಸ್ಥಾನದ ಸುತ್ತಮುತ್ತ ಮಲಿನಗೊಳಿಸಿದ್ದಾನೆ ಎಂದು ಆರೋಪಿಸಿ 22 ವರ್ಷದ ಅಝರ್ ಖಾನ್ ಎಂಬವರಿಗೆ ದುಷ್ಕರ್ಮಿಗಳ ಗುಂಪೊಂದು ಥಳಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಝರ್ ಖಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅಝರ್ ಇತರ ಮೂವರೊಂದಿಗೆ ಮೀನು ಹಿಡಿಯಲು ರೂಪರೇಲ್ ನದಿತೀರಕ್ಕೆ ತೆರಳಿದ್ದರು. ಮೀನು ಹಿಡಿಯುತ್ತಿದ್ದಾಗ ಇದ್ದಕ್ಕಿದ್ದಂತೆ ಗುಂಪೊಂದು ಇವರ ಮೇಲೆ ದಾಳಿ ನಡೆಸಿತು. ಇತರ ಮೂವರು ಓಡಿಹೋಗಿದ್ದು, ಅಝರ್ ಗೆ ಗುಂಪು ಥಳಿಸಿತ್ತು. ದೊಣ್ಣೆಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕೂಡಲೇ ಅವರನ್ನು ಚಿತ್ತೋರ್ ಘರ್ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಉದಯ್ ಪುರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಗಂಭೀರ ಗಾಯಗಳಿಂದ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News