ಹಾಡಹಗಲೇ ನಡುರಸ್ತೆಯಲ್ಲಿ ವ್ಯಕ್ತಿಯ ಕೊಚ್ಚಿ ಕೊಲೆ: ಮೂಕಪ್ರೇಕ್ಷಕರಾದ ಪೊಲೀಸರು

Update: 2018-09-26 13:51 GMT

ಹೈದರಾಬಾದ್,ಸೆ.26: ಜನನಿಬಿಡ ರಸ್ತೆಯಲ್ಲಿ ಪೊಲೀಸರ ಕಣ್ಣೆದುರೇ ವ್ಯಕಿಯೋರ್ವನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆ ಬುಧವಾರ ನಗರದಲ್ಲಿ ನಡೆದಿದೆ. ಈ ಸಂದರ್ಭ ಅಲ್ಲಿ ಹಲವಾರು ಜನರಿದ್ದರೂ ಕೊಲೆಯನ್ನು ತಡೆಯಲು ಯಾರೂ ಮುಂದಾಗಿರಲಿಲ್ಲ, ಹೆಚ್ಚಿನವರು ಘಟನೆಯ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿಯುವಲ್ಲಿ ಮಗ್ನರಾಗಿದ್ದರು!

ರಾಜೇಂದ್ರ ನಗರದಲ್ಲಿ ವ್ಯಕ್ತಿಯೋರ್ವನನ್ನು ರಸ್ತೆಯಲ್ಲಿ ಅಟ್ಟಾಡಿಸಿಕೊಂಡ ಬಂದ ಇಬ್ಬರು ಆತನನ್ನು ಕೊಡಲಿಯಿಂದ ಮನಸೋ ಇಚ್ಛೆ ಕೊಚ್ಚಿದ್ದಾರೆ. ರಕ್ತದ ಮಡುವಿನಲ್ಲಿ ಹೊರಳಾಡುತ್ತಿದ್ದ ವ್ಯಕ್ತಿಯ ಉಸಿರು ನಿಂತ ಬಳಿಕ ದಾಳಿಕೋರರಲ್ಲೋರ್ವ ವಿಜಯದ ಸಂಕೇತವಾಗಿ ಕೈಗಳನ್ನು ಮೇಲಕ್ಕೆತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಕಂಡು ಬರುತ್ತಿದೆ.

ರಸ್ತೆಯ ನಡುವೇ ಕೊಲೆ ನಡೆಯುತ್ತಿದ್ದರೂ ಅಲ್ಲಿದ್ದ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ಅವರಲ್ಲೋರ್ವ ಹಂತಕನನ್ನು ತಡೆಯಲು ಪ್ರಯತ್ನಿಸಿದ್ದನಾದರೂ ಸಾಧ್ಯವಾಗಿರಲಿಲ್ಲ. ಇದೇ ವೇಳೆ ಸೈಬರಾಬಾದ್ ಪೊಲೀಸ್ ವಾಹನ ಅಲ್ಲಿಗೆ ಬಂದಿದ್ದರೂ ನಿಲ್ಲದೆ ಹೊರಟುಹೋಗಿತ್ತು.

ಇಬ್ಬರು ಪೊಲೀಸರು ತಮ್ಮ ಲಾಠಿಗಳನ್ನು ತರಲು ತೆರಳಿದ್ದರು. ಆದರೆ ಅವರು ಮರಳಿ ಬರುವಷ್ಟರಲ್ಲಿ ಕೊಲೆ ನಡೆದುಹೋಗಿತ್ತು ಎಂದು ಡಿಸಿಪಿ ಪ್ರಕಾಶ ರೆಡ್ಡಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾಗಿರುವ ವ್ಯಕ್ತಿಯನ್ನು ರಮೇಶ್ ಎಂದು ಗುರುತಿಸಲಾಗಿದ್ದು, ಈತ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದಿದ್ದ ಆರೋಪಿಗಳ ಪೈಕಿ ಕೃಷ್ಣಗೌಡ ಎಂಬಾತನ ಮಗ ಮಹೇಶ ಗೌಡನ ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ.

ಬುಧವಾರ ರಮೇಶ ನ್ಯಾಯಾಲಯದಿಂದ ವಾಪಸಾಗುತ್ತಿದ್ದಾಗ ಕೃಷ್ಣೇಗೌಡ ಮತ್ತು ಆತನ ಸೋದರ ಲಕ್ಷ್ಮಣ ಗೌಡ ಸೇರಿಕೊಂಡು ಕೊಂದು ಮುಗಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News