ಪುತ್ತೂರು : ವಿದ್ಯುತ್ ಆಘಾತದಿಂದ ಯುವಕ ಮೃತ್ಯು

Update: 2018-10-10 11:53 GMT

ಪುತ್ತೂರು, ಅ. 10: ಮನೆಯ ವಿದ್ಯುತ್ ಸಂಪರ್ಕದ ಸರ್ವಿಸ್ ವಯರಿನ ಮೂಲಕ ವಿದ್ಯುತ್ ಸ್ಪರ್ಶಿಸಿ ಒಬ್ಬಂಟಿಯಾಗಿ ಮನೆಯಲ್ಲಿ ವಾಸ್ತವ್ಯವಿದ್ದ ಅವಿವಾಹಿತ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಪುತ್ತೂರು ನಗರ ಠಾಣೆ ವ್ಯಾಪ್ತಿಯಲ್ಲಿನ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುಕ್ಕಾಜೆ ಎಂಬಲ್ಲಿ ನಡೆದಿದೆ.

ಕುಕ್ಕಾಜೆ ನಿವಾಸಿ ರಾಮ ಬಂಗೇರ ಎಂಬವರ ಪುತ್ರ ದಯಾನಂದ (30) ಮೃತಪಟ್ಟ ಯುವಕ.

ಟೈಲ್ಸ್, ಮಾರ್ಬಲ್, ಗ್ರಾನೈಟ್ ಅಳವಡಿಸುವ ಗಾರೆ ಕಾರ್ಮಿಕರಾಗಿದ್ದ ದಯಾನಂದ ಕುಕ್ಕಾಜೆಯ ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ಅವರ ಮೃತದೇಹ ಬುಧವಾರ ಮನೆಯ ಅಂಗಳ ಬದಿಯಲ್ಲಿ ವಿದ್ಯುತ್ ತಂತಿಯನ್ನು ಹಿಡಿದುಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ದಯಾನಂದ ಮಂಗಳವಾರ ರಾತ್ರಿ ವೇಳೆ ಮನೆಗೆ ವಿದ್ಯುತ್ ಸರಬರಾಜು ಆಗದ ಕಾರಣ ವಿದ್ಯುತ್ ಸಂಪರ್ಕದ ಸರ್ವಿಸ್ ವಯರ್ ಸರಿಪಡಿಸಲು ವಿದ್ಯುತ್ ವಯರ್ ನ್ನು ಸ್ಪರ್ಶಿಸಿದ ವೇಳೆ ತಂತಿ ಮೂಲಕ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. 

ರಾಮ ಬಂಗೇರ ಕಾಸರಗೋಡು ಜಿಲ್ಲೆಯ ಬದಿಯಡ್ಕದ ಹೋಟೆಲ್ ಒಂದರಲ್ಲಿ ಅಡುಗೆ ತಯಾರಕರಾಗಿ ಕೆಲಸ ಮಾಡುತ್ತಿದ್ದು, ತಾಯಿ ಈ ಹಿಂದೆಯೇ ನಿಧನರಾಗಿದ್ದಾರೆ. ವಿವಾಹಿತನಾಗಿರುವ ಸಹೋದರ ಮಂಗಳೂರಿನಲ್ಲಿ ನೆಲೆಸಿದ್ದು, ಈ ಹಿನ್ನಲೆಯಲ್ಲಿ ದಯಾನಂದ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. 

ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News