ತೀವ್ರ ಕಾಲು ನೋವು : ಸಚಿವ ಖಾದರ್ ಮತ್ತೆ ಆಸ್ಪತ್ರೆಗೆ

Update: 2018-10-10 18:00 GMT

ಮಂಗಳೂರು, ಅ. 10 : ಬಲಗಾಲಿನ ತೀವ್ರ ನೋವಿಗೆ ಮತ್ತೆ ಒಳಗಾಗಿರುವ ನಗರಾಭಿವೃದ್ಧಿ, ವಸತಿ ಹಾಗು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಮತ್ತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಪರೀಕ್ಷೆಗೆ ಒಳಗಾಗಿದ್ದಾರೆ.

ಎಂ ಆರ್ ಐ ಪರೀಕ್ಷೆಯ ಬಳಿಕ ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಶಸ್ತ್ರಚಿಕಿತ್ಸೆಗೆ ಒಳಗಾದರೆ ಹಲವು ದಿನ ಕೆಲಸದಿಂದ ದೂರ ಇರಬೇಕಾಗುತ್ತದೆ ಎಂಬ ಕಾರಣಕ್ಕೆ ಅದನ್ನು ಮಾಡಿಸಿಕೊಳ್ಳಲು ಸಿದ್ಧರಿಲ್ಲದ ಸಚಿವ ಖಾದರ್ ಸ್ವಲ್ಪ ವಿರಾಮ ಪಡೆದು ಮತ್ತೆ ಪರೀಕ್ಷೆ ಮಾಡಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.

ಕಳೆದ ತಿಂಗಳಷ್ಟೇ ತೀವ್ರ ಕಾಲು ನೋವಿಗಾಗಿ ಮಂಗಳೂರಿನಲ್ಲಿ  ಚಿಕಿತ್ಸೆ ಪಡೆದು ಮತ್ತೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಜಿಂದಾಲ್ ಆಸ್ಪತ್ರೆಗೆ ಒಂದು ವಾರ ದಾಖಲಾಗಿದ್ದರು ಸಚಿವ ಖಾದರ್. ಇದೀಗ ಮತ್ತೆ ಬೆಂಗಳೂರು, ಮಂಗಳೂರು ಸಹಿತ ರಾಜ್ಯಾದ್ಯಂತ ನಿರಂತರ ಪ್ರಯಾಣದಿಂದ ಕಾಲು ನೋವು ಉಲ್ಬಣಗೊಂಡಿದೆ ಎಂದು ತಿಳಿದು ಬಂದಿದೆ. ಒಂದೆರಡು ದಿನಗಳಲ್ಲಿ ನೋವು ಕಡಿಮೆಯಾಗದಿದ್ದಲ್ಲಿ ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News