ಮಂಗಳೂರು:ಬೀಡಿ ಕಾರ್ಮಿಕರ ಜಾಥಾಕ್ಕೆ ಚಾಲನೆ
ಮಂಗಳೂರು, ಅ.11: ರಾಜ್ಯ ಸರಕಾರವು ಕನಿಷ್ಟ ಕೂಲಿ ಕಾಯ್ದೆಯಡಿ ಸಮಿತಿ ರಚಿಸಿ ಎಲ್ಲರ ಒಮ್ಮತ ಪಡೆದು ಘೋಷಿಸಲ್ಪಟ್ಟ ಕನಿಷ್ಟ ಕೂಲಿ 1,000 ಬೀಡಿಗೆ 210 ರೂ.ವನ್ನು 2018ರ ಎ.1ರಿಂದ ಬೀಡಿ ಕಾರ್ಮಿಕರಿಗೆ ನೀಡಬೇಕಾಗಿದ್ದರೂ ಕೂಡಾ ಬೀಡಿ ಮಾಲಕರು ಅದನ್ನು ಕೊಡದೆ ಸತಾಯಿಸುವ ನೀತಿಯನ್ನು ಖಂಡಿಸಿ ಬೀಡಿ ಕಾರ್ಮಿಕರ ಸಂಘಟನೆಗಳಾದ ಸಿಐಟಿಯು, ಎಐಟಿಯುಸಿ, ಬಿಎಂಎಸ್, ಎಚ್ಎಂಎಸ್ನ ನೇತೃತ್ವದಲ್ಲಿ ನಡೆಯುವ ಹೋರಾಟ ಜಾಥಾಕ್ಕೆ ಗುರುವಾರ ದ.ಕ. ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಚಾಲನೆ ನೀಡಲಾಯಿತು.
ಸಿಐಟಿಯು ಹಿರಿಯ ನಾಯಕ ಕೆ.ಆರ್.ಶ್ರೀಯಾನ್ ಜಾಥಾಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ನ ಅಧ್ಯಕ್ಷ ವಸಂತ ಆಚಾರಿ, ಪ್ರಧಾನ ಕಾರ್ಯದರ್ಶಿ ಜೆ.ಬಾಲಕೃಷ್ಣ ಶೆಟ್ಟಿ, ಎಚ್ಎಂಎಸ್ ಅಧ್ಯಕ್ಷ ಎಂ. ಸುರೇಶ್ಚಂದ್ರ ಶೆಟ್ಟಿ, ಮುಹಮ್ಮದ್ ರಫಿ, ಬಿಎಂಎಸ್ ಕಾರ್ಯದರ್ಶಿ ಭಾಸ್ಕರ ರಾವ್, ಎಐಟಿಯುಸಿ ಅಧ್ಯಕ್ಷ ಕೆ.ವಿ.ಭಟ್, ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ ಮತ್ತಿತರ ನಾಯಕರಿದ್ದರು.
ಈ ಜಾಥಾ ವಿವಿಧೆಡೆ ಸಂಚರಿಸಿ ಬೀಡಿ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲಿದೆ. ಅ 13ರಂದು ಸಂಜೆ ಸಮಾರೋಪಗೊಳ್ಳಲಿದೆ.