ಮಲ್ಪೆ ಸಮುದ್ರದಲ್ಲಿ ಮುಳುಗಿ ಬಾಲಕ ಸಹಿತ ಇಬ್ಬರು ಮೃತ್ಯು

Update: 2018-10-19 16:21 GMT

ಮಲ್ಪೆ, ಅ.19: ಮಲ್ಪೆ ಬೀಚ್‌ನಲ್ಲಿ ಇಂದು ಸಂಜೆ ಸಂಭವಿಸಿದ ಪ್ರತ್ಯೇಕ ಪ್ರಕರಣದಲ್ಲಿ ವಿಹಾರಕ್ಕೆ ಬಂದಿದ್ದ ಬಾಲಕ ಸಹಿತ ಇಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ತುಮಕೂರು ದಾಬಸ್‌ಪೇಟೆಯ ಸುರೇಶ್(29) ಹಾಗೂ ಹಾಸನ ಬೇಲೂರಿನ ನ್ಯಾಯವಾದಿ ಆನಂದ ಮತ್ತು ರುದ್ರಾಣಿ ದಂಪತಿ ಪುತ್ರ ಮೋಕ್ಷಿತ್ (9) ಎಂದು ಗುರುತಿಸಲಾಗಿದೆ.

ಸುರೇಶ್ ತನ್ನ 14 ಮಂದಿ ಕುಟುಂಬ ಸದಸ್ಯರೊಂದಿಗೆ ಪುಣ್ಯ ಕ್ಷೇತ್ರಗಳ ಪ್ರವಾಸ ಕೈಗೊಂಡಿದ್ದು, ಶಬರಿಮಲೆ, ಧರ್ಮಸ್ಥಳಗಳಿಗೆ ಭೇಟಿ ನೀಡಿ ಇಂದು ಸಂಜೆ ಮಲ್ಪೆ ಬೀಚ್‌ಗೆ ಆಗಮಿಸಿದ್ದರು. ಸಮುದ್ರದಲ್ಲಿ ಆಡುತ್ತಿದ್ದ ಸುರೇಶ್ ಅಲೆಯ ರಭಸಕ್ಕೆ ನೀರಿನಲ್ಲಿ ಮುಳುಗಿ ಮೃತಪಟ್ಟರೆನ್ನಲಾಗಿದೆ. ದಾಬಸ್ ಪೇಟೆಯ ಶಾಲೆಯೊಂದರಲ್ಲಿ ಗುಮಾಸ್ತನಾಗಿ ದುಡಿಯುತ್ತಿದ್ದ ಸುರೇಶ್, ನಾಲ್ಕು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದರು.

ಸಂಜೆ ವೇಳೆ ಕುಟುಂಬದೊಂದಿಗೆ ಬೀಚ್‌ಗೆ ಆಗಮಿಸಿದ ಆನಂದ್, ತನ್ನ ಪತ್ನಿ ಹಾಗೂ ಮಗ ಮೋಕ್ಷಿತ್ ಜೊತೆ ನೀರಿನಲ್ಲಿ ಆಡುತ್ತಿದ್ದರೆನ್ನಲಾಗಿದೆ. ಈ ವೇಳೆ ಅಪ್ಪಳಿಸಿದ ಬೃಹತ್ ಅಲೆಗೆ ಸಿಲುಕಿದ ಬಾಲಕ ನೀರಿನಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡು ಸ್ಥಳದಲ್ಲೇ ಮೃತಪಟ್ಟನು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹಗಳ ಮರಣೋತ್ತರ ಪರೀಕ್ಷೆ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ನಡೆಸಲಾಯಿತು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News