ಅಡ್ಯಾರ್ ರಸ್ತೆ ಅಪಘಾತ ಪ್ರಕರಣ: ಎರಡೂವರೆ ತಿಂಗಳ ಬಳಿಕ ಕಾರು ಚಾಲಕ ಸಾವು

Update: 2018-10-19 17:19 GMT

ಮಂಗಳೂರು, ಅ.19: ಅಡ್ಯಾರ್‌ಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಎರಡೂವರೆ ತಿಂಗಳ ಹಿಂದೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಮಾರಣಾಂತಿಕ ಗಾಯಗೊಂಡು ಜೀವನ್ಮರಣ ಮಧ್ಯೆ ಹೋರಾಟ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿದ್ದ ಮೈಸೂರಿನ ಯು.ಬಿ. ನಾಯಕ್ (67) ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಾವನ್ನಪ್ಪಿದ್ದಾರೆ.

ಕಳೆದ ಆಗಸ್ಟ್ 1ರಂದು ಅಡ್ಯಾರ್‌ಕಟ್ಟೆಯಲ್ಲಿ ಬಿ.ಸಿ ರೋಡ್ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಅಶ್ಮಿತ್ ಟ್ರಾವೆಲ್ಸ್ ಎಂಬ ಖಾಸಗಿ ಬಸ್‌ನ ಮುಂಭಾಗದ ಬಲಬದಿಯ ಟೈರ್ ಸ್ಫೋಟಗೊಂಡು ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕ ದಾಟಿ ಮಗುಚಿ ಬಿದ್ದಿತ್ತು.

ಈ ಸಂದರ್ಭ ಮಂಗಳೂರಿನಿಂದ ಮೈಸೂರು ಕಡೆ ಹೋಗುತ್ತಿದ್ದ ಯು.ಬಿ. ನಾಯಕ್ ಚಲಾಯಿಸುತ್ತಿದ್ದ ಕಾರು ಬಸ್‌ನಡಿ ಸಿಲುಕಿತ್ತು. ಬಸ್‌ನಲ್ಲಿದ್ದ ಪ್ರಯಾಣಿಕರು ಮತ್ತು ಕಾರು ಚಾಲಕ ಯು.ಬಿ. ನಾಯಕ್ ಸೇರಿದಂತೆ 16 ಮಂದಿ ಗಾಯಗೊಂಡಿದ್ದರು. ಯು.ಬಿ. ನಾಯಕ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು.
ಸಂಚಾರ ದಕ್ಷಿಣ ಠಾಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News