ಸ್ಕೂಟರ್-ಬೈಕ್ ನಡುವೆ ಅಪಘಾತ: ಇಬ್ಬರಿಗೆ ಗಾಯ

Update: 2018-10-20 17:07 GMT

ಮಂಗಳೂರು, ಅ.20: ಸ್ಕೂಟರ್ ಮತ್ತು ಬೈಕ್‌ಗಳ ನಡುವೆ ನಡೆದ ಅಪಘಾತದಲ್ಲಿ ಸವಾರ, ಹಿಂಬದಿ ಸವಾರರಿಬ್ಬರು ಗಾಯಗೊಂಡ ಘಟನೆ ನಗರದ ಬಿಜೈನ ಸುಪರ್ ಮಾರ್ಕೆಟ್‌ವೊಂದರ ಬಳಿ ಶನಿವಾರ ನಡೆದಿದೆ.

ಗಾಯಾಳುಗಳನ್ನು ಎಸಿಪಿ ಭಾಸ್ಕರ್ ಅವರ ಪತ್ನಿ ಶಿಲ್ಪಾ (38) ಹಾಗೂ ಅಕ್ಷಯ್‌ಕುಮಾರ್ (22) ಎಂದು ಗುರುತಿಸಲಾಗಿದ್ದು, ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅ.20ರಂದು  ಅಕ್ಷಯ್‌ಕುಮಾರ್ ತನ್ನ ಅತ್ತೆ ಶಿಲ್ಪಾ ಅವರನ್ನು ಸ್ಕೂಟರ್‌ನಲ್ಲಿ ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಬಿಜೈ ಕೆಎಸ್ಸಾರ್ಟಿಸಿ ಕಡೆಯಿಂದ ಬಿಜೈ ಸರ್ಕಲ್ ಮೂಲಕ ರೂಪಾ ಹೋಟೆಲ್ ಬಳಿಯ ಶಿಲ್ಪಾ ಅವರ ಫ್ಲಾಟ್‌ಗೆ ಬಿಟ್ಟು ಬರಲು ತೆರಳುತ್ತಿದ್ದರು. ಈ ವೇಳೆ ಬಿಜೈ ಮೋರ್ ಸುಪರ್ ಮಾರ್ಕೆಟ್ ಬಳಿ ತಲುಪುತ್ತಿದ್ದಂತೆ ಘಟನೆ ನಡೆದಿದೆ.

ಪಿಯೋ ಮಾಲ್ ಕಡೆಯಿಂದ ಬರುತ್ತಿದ್ದ ಬೈಕೊಂದು ನಿಯಂತ್ರಣ ತಪ್ಪಿ ಅಕ್ಷಯ್‌ಕುಮಾರ್ ಚಲಾಯಿಸುತ್ತಿದ್ದ ಸ್ಕೂಟರಿಗೆ ಎದುರಿನಿಂದ ಢಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಸಮೇತ ಕಾಂಕ್ರಿಟ್ ರಸ್ತೆಗೆ ಬಿದ್ದು ಅಕ್ಷಯ್‌ಕುಮಾರ್ ಮತ್ತು ಶಿಲ್ಪಾ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸ್ಕೂಟರ್‌ಗೆ ಢಿಕ್ಕಿ ಹೊಡೆಸಿದ ಬೈಕ್ ಸವಾರ ಬೈಕ್‌ನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News