ಕಿತ್ತೂರು ರಾಣಿ ಚೆನ್ನಮ್ಮ ಶೌರ್ಯದ ಸಂಕೇತ: ಡಾ.ಪುಂಡಿಕಾ ಗಣಪಯ್ಯ ಭಟ್

Update: 2018-10-23 13:07 GMT

ಮಂಗಳೂರು, ಅ.23: ಬ್ರಿಟಿಷರ ವಿರುದ್ಧ ಹೋರಾಡಿದ ಭಾರತದ ಮೊದಲ ಮಹಿಳೆ ಕಿತ್ತೂರಿನ ರಾಣಿ ಚೆನ್ನಮ್ಮ. ಆಕೆ ಸ್ವಾತಂತ್ರ್ಯ, ಶೌರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿದ್ದಾಳೆ ಎಂದು ಇತಿಹಾಸ ಸಂಶೋಧಕ ಡಾ.ಪುಂಡಿಕಾ ಗಣಪಯ್ಯ ಭಟ್ ಹೇಳಿದ್ದಾರೆ.

ನಗರದ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕತಿ ಇಲಾಖೆಗಳ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಚೆನ್ನಮ್ಮ ರಾಣಿ ಬ್ರಿಟಿಷರೊಂದಿಗೆ ನಡೆಸಿದ ಮೊದಲ ಯುದ್ಧದಲ್ಲಿ ಬ್ರಿಟಿಷ್ ಕಲೆಕ್ಟರ್ ಥ್ಯಾಕರೆಯ ಸಾವಾಯಿತು. ಚೆನ್ನಮ್ಮ ರಾಣಿಯ ಸೈನ್ಯ ಬ್ರಿಟಿಷ್ ಸೈನ್ಯವನ್ನು ಸದೆ ಬಡಿಯಿತು. ಆದರೆ ಮುಂದೆ ಎರಡನೆಯ ಬಾರಿ ಯುದ್ಧ ನಡೆದಾಗ ತನ್ನವರ ಸಂಚಿನಿಂದಾಗಿ ಸೋಲಬೇಕಾಯಿತು. ಆಕೆಯನ್ನು ಬೈಲಹೊಂಗಲದಲ್ಲಿ ಗೃಹ ಬಂಧನದಲ್ಲಿ ಇಡಲಾಯಿತು. ಚೆನ್ನಮ್ಮ ರಾಣಿ ಐದು ವರ್ಷ ಬಂಧನದಲ್ಲಿದ್ದು ಅಲ್ಲಿಯೇ ನಿಧನರಾದರು ಎಂದು ಗಣಪಯ್ಯ ಭಟ್ ಹೇಳಿದರು.

ಚೆನ್ನಮ್ಮ ರಾಣಿಯ ಕುರಿತಾಗಿ ಸ್ಮಾರಕಗಳು ಸಾಕಷ್ಟಿವೆ. ಆದರೆ ಅವೆಲ್ಲವೂ ಭೌತಿಕ ಸ್ಮಾರಕಗಳಾಗಿವೆ. ನಾವು ಚೆನ್ನಮ್ಮ ರಾಣಿಯನ್ನು ಮನದಲ್ಲಿ ಆರಾಧಿಸಬೇಕು. ಅದು ಆಕೆಗೆ ನೀಡುವ ನಿಜವಾದ ಗೌರವ ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ ದೀಪ ಬೆಳಗಿಸಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಗೆ ಚಾಲನೆ ನೀಡಿದರು. ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಪಂ ಸಹಾಯಕ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ.ಜೆ. ಸಜಿತ್, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಟಿ.ನಾರಾಯಣ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News