ಕೋಟ: ಆ್ಯಂಬುಲೆನ್ಸ್- ಲಾರಿ ನಡುವೇ ಭೀಕರ ಅಪಘಾತ; ಮೂವರು ಮೃತ್ಯು
ಕುಂದಾಪುರ, ಅ.27: ಆ್ಯಂಬುಲೆನ್ಸ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ಕೋಟ ಮಣೂರು ಎಂಬಲ್ಲಿ ಇಂದು ನಸುಕಿನ ಜಾವ 1:30ರ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಮಹಿಳೆ ಸಹಿತ ಇನ್ನಿಬ್ಬರು ಗಾಯಗೊಂಡಿದ್ದಾರೆ. ಮೃತರು ಹಾಗೂ ಗಾಯಾಳುಗಳು ಉತ್ತರ ಕನ್ನಡ ಮೂಲದವರು.
ಮೃತರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಉಲ್ಲಾಸ್ ತಳೇಕರ್, ಅವರ ಸಂಬಂಧಿಕ ಅಶೋಕ್ ಹಾಗೂ ಶೈಲೇಶ್ ಎಂದು ಗುರುತಿಸಲಾಗಿದೆ.
ಹೃದ್ರೋಗಿಯಾಗಿದ್ದ ಉಲ್ಲಾಸ್ ತಳೇಕರ್ ಅವರನ್ನು ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಆಸ್ಪತ್ರೆಯಿಂದ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಇವರಿದ್ದ ಆ್ಯಂಬುಲೆನ್ಸ್ ಕೋಟ ಮಣೂರು ಎಂಬಲ್ಲಿಗೆ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್ ರಸ್ತೆ ಡಿವೈಡರ್ ದಾಟಿ ಲಾರಿಗೆ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ಬಳಿಕ ಆ್ಯಂಬುಲೆನ್ಸ್ ಉರುಳಿಬಿದ್ದಿದೆ. ಈ ವೇಳೆ ಆ್ಯಂಬುಲೆನ್ಸ್ನಲ್ಲಿದ್ದ ಉಲ್ಲಾಸ್ ತಳೇಕರ್, ಅವರ ಸಂಬಂಧಿಕ ಅಶೋಕ್ ಹಾಗೂ ಇನ್ನೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಲ್ಲಾಸ್ರ ಪತ್ನಿ ಸರಿತಾ ಉಲ್ಲಾಸ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ್ಯಂಬುಲೆನ್ಸ್ ಚಾಲಕ ರಾಘವೇಂದ್ರ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಮೃತದೇಹಗಳನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತಕ್ಕೀಡಾದ ಆ್ಯಂಬುಲೆನ್ಸ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.