ಬಂಟ್ವಾಳ: ಬಾವಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

Update: 2018-11-14 13:56 GMT

ಬಂಟ್ವಾಳ, ನ. 14: ವಿದ್ಯಾರ್ಥಿನಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. 

ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದ ಮಣ್ಣೂರು ನಿವಾಸಿ ಚಂದ್ರ ಪೂಜಾರಿ ಅವರ ಪುತ್ರಿ, ಪುಂಜಾಲಕಟ್ಟೆ ಶಾಲೆಯ 8ನೆ ತರಗತಿಯ ವಿದ್ಯಾರ್ಥಿನಿ ಶ್ರದ್ಧಾ (13) ಆತ್ಮಹತ್ಯೆ ಮಾಡಿಕೊಂಡವಳು.

ಮಂಗಳವಾರ ರಾತ್ರಿ ಎಂದಿನಂತೆ ಊಟ ಮುಗಿಸಿ ಮಲಗಿದ್ದ ಶ್ರದ್ಧಾ ಬೆಳಗ್ಗೆ 6 ಗಂಟೆ ಸುಮಾರಿಗೆ ತನ್ನ ಮನೆಯಿಂದ ಸ್ವಲ್ಪ ದೂರದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳಗ್ಗೆ ಶ್ರದ್ಧಾ ಕಾಣೆಯಾಗಿರುವುದು ಮನೆಮಂದಿಯ ಗಮನಕ್ಕೆ ಬಂದಿದ್ದು, ತದನಂತರ ಹುಡುಕಾಟ ನಡೆಸಿದಾಗ ಇಲ್ಲಿನ ಬಾವಿಯ ಪಕ್ಕ ಟಾರ್ಚ್ ಲೈಟ್ ಕಂಡು ಬಂದಿದ್ದು, ಬಾವಿಯಲ್ಲಿ ಶ್ರದ್ಧಾಳ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. 

ಸುದ್ದಿ ತಿಳಿದ ಸ್ಥಳೀಯ ಗ್ರಾಪಂ ಸದಸ್ಯ ದಯಾನಂದ ಕುಲಾಲ್ ಮತ್ತು ಜಿಪಂ ಸದಸ್ಯ ಎಂ. ತುಂಗಪ್ಪ ಬಂಗೇರ ಸ್ಥಳಕ್ಕಾಗಮಿಸಿ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಬಾವಿ ಸುಮಾರು 45 ಅಡಿ ಆಳವಿದ್ದು 30 ಅಡಿಯಷ್ಟು ನೀರಿದ್ದು, ಬಂಟ್ವಾಳ ಅಗ್ನಿ ಶಾಮಕ ದಳ ಆಗಮಿಸಿ ಮೃತದೇಹವನ್ನು ಮೇಲಕೆತ್ತುವಲ್ಲಿ ಯಶಸ್ವಿಯಾದರು. 

ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಡೆಸಲಾಗಿದೆ. ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇಂದು ಶಾಲೆಯಲ್ಲಿ ಶ್ರದ್ಧಾ ಶೋಕಾರ್ಥವಾಗಿ ಮೌನಾಚರಣೆ ನಡೆಸಿ ರಜೆ ಸಾರಲಾಗಿತ್ತು. ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದ ಮೃತಳ ಮನೆಗೆ ತೆರಳಿ ಮನೆ ಮಂದಿಗೆ ಸಾಂತ್ವನ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News