ಕಾಪು ಜನೌಷಧ ಕೇಂದ್ರ ಮುಚ್ಚುಗಡೆ: ಕಾಂಗ್ರೆಸ್ ಪ್ರತಿಭಟನೆ
ಕಾಪು, ನ. 16: ಕಾಪುವಿನಲ್ಲಿ ಕಾರ್ಯಾಚರಿಸುತಿದ್ದ ಜನೌಷಧ ಕೇಂದ್ರ ದಿಢೀರ್ ಬಂದ್ ಮಾಡಿರುವುದನ್ನು ವಿರೋಧಿಸಿ ಶುಕ್ರವಾರ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಜನೌಷಧ ಕೇಂದ್ರದ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಸುವರ್ಣ ಅಡ್ವೆ ಅವರ ನೇತೃತ್ವದಲ್ಲಿ ಕಾಪು ರಾಜೀವ ಭವನದಿಂದ ತಾಲೂಕು ಕಛೇರಿಯವರೆಗೆ ಘೋಷಣೆ ಗಳನ್ನು ಕೂಗುತ್ತಾ ಕಾರ್ಯಕರ್ತರು ಮೆರವಣಿಗೆ ಮೂಲಕ ಬಂದು ಜನೌಷ ಕೇಂದ್ರದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಉಪ ತಹಶೀಲ್ದಾರ್ ಮುರಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ವಿನಯಕುಮಾರ್ ಸೊರಕೆ, ಜನಸಾಮಾನ್ಯರಿಗೆ ಕಡಿಮೆ ಬೆಲೆಯ ಔಷ ನೀಡುವ ಭರವಸೆ ಹುಟ್ಟಿಸಿ ಇದೀಗ ದಿಢೀರ್ ಬಂದ್ ಆಗಿರುವ ಜನೌಷಧ ಕೇಂದ್ರ ಬಾಗಿಲು ಮುಚ್ಚಿ ಸಾಕಷ್ಟು ದಿನಗಳಾದರೂ ಸಂಸದೆ ಶೋಭಾ ಕರಂದ್ಲಾಜೆಯಾಗಲಿ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ತಮ್ಮ ಕಛೇರಿಯ ಪಕ್ಕದಲ್ಲೇ ಇರುವ ಜನೌಷಧ ಕೇಂದ್ರ ಬಾಗಿಲು ಮುಚ್ಚಿದರೂ ಆ ಬಗ್ಗೆ ಯಾವುದೇ ಪ್ರಯತ್ನ ಮಾಡದ ಶಾಸಕ ಲಾಲಾಜಿ ಮೆಂಡನ್ ಕಾಪುವಿನ ಜನರಿಗೆ ಬಂದ್ ಭಾಗ್ಯ ಕರುಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಬೆಳಪು, ರಾಜ್ಯ ಹಿಂದುಳಿದ ವರ್ಗಗಳ ಘಟಕದ ಕಾರ್ಯದರ್ಶಿ ಶಿವಾಜಿ ಸುವರ್ಣ ಬೆಳ್ಳೆ, ರಾಜ್ಯ ವಕ್ಪ್ ಸಮಿತಿ ಉಪಾಧ್ಯಕ್ಷ ಗುಲಾಮ್ ಮಹಮ್ಮದ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾವಾಗ್ಳೆ, ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಕಾಪು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಸಾದಿಕ್, ದೀಪಕ್ ಕುಮಾರ್, ಪ್ರಭಾವತಿ ಸಾಲ್ಯಾನ್, ಮೆಲ್ವಿನ್ ಡಿಸೋಜಾ, ಕಾಪು ಪುರಸಭೆ ಅಧ್ಯಕ್ಷೆ ಮಾಲಿನಿ, ಐಡಾ ಗಿಬ್ಬಾ ಡಿಸೋಜಾ, ಅಮೀರ್ ಮಹ್ಮದ್, ವೈ.ಸುಧೀರ್, ಕೆ.ಎ ಉಸ್ಮಾನ್, ಹರೀಶ್ ನಾಯಕ್ ಪಕ್ಷದ ಕಾರ್ಯಕರ್ತರು ಉಸ್ಥಿತರಿದ್ದರು.