ರೈತರ ಸಾಲ ತೀರಿಸಿದ ಬಾಲಿವುಡ್ ಸೂಪರ್ ಸ್ಟಾರ್
ಮುಂಬೈ,ನ.20: ಉತ್ತರಪ್ರದೇಶದ 1398 ಮಂದಿ ರೈತರಿಗೆ ಅವರ ಸಾಲವನ್ನು ಪಾವತಿಸಲು ತಾನು ನೆರವಾಗಿದ್ದಾಗಿ ಬಾಲಿವುಡ್ನ ಬಿಗ್ ಬಿ ಎಂದೇ ಹೆಸರಾದ ಖ್ಯಾತ ನಟ ಅಮಿತಾಭ್ ಬಚ್ಚನ್ ತಿಳಿಸಿದ್ದಾರೆ.
ಸೋಮವಾರ ತನ್ನ ಬ್ಲಾಗ್ನಲ್ಲಿ ಪ್ರಸಾರ ಮಾಡಿದ ಪೋಸ್ಟ್ ಒಂದರಲ್ಲಿ ಈ ವಿಷಯ ತಿಳಿಸಿದ 76 ವರ್ಷದ ಹಿರಿಯ ನಟ ಅಮಿತಾಭ್, ತಾನು ಉತ್ತರಪ್ರದೇಶದ ಆಯ್ದ 70 ಮಂದಿ ರೈತರಿಗೆ ಮುಂಬೈ ಪ್ರಯಾಣಿಸಿ, ಅಲ್ಲಿ ಅವರು ತಮ್ಮ ಬ್ಯಾಂಕ್ ಸಾಲ ಮನ್ನಾ ಪತ್ರಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಮಾಡಿದ್ದೆ ಎಂದರು.
ಬಚ್ಚನ್ ಅವರು ಈ ಹಿಂದೆ, ಮಹಾರಾಷ್ಟ್ರದ 350 ಮಂದಿ ರೈತರ ಸಾಲಮನ್ನಾ ಮಾಡಲು ನೆರವಾಗಿದ್ದರು.
‘‘ರೈತರ ಬವಣೆಯ ಹೊರೆಯನ್ನು ಒಂದಿಷ್ಟು ಕಡಿಮೆಗೊಳಿಸುವ ಹಂಬಲವು ಧನ್ಯತಾ ಭಾವವನ್ನು ಮೂಡಿಸುತ್ತದೆ. ಮೊದಲಿಗೆ ಮಹಾರಾಷ್ಟ್ರದಲ್ಲಿ 350 ರೈತರ ಸಾಲವನ್ನು ತೀರಿಸುವ ಹೊಣೆಯನ್ನು ವಹಿಸಿಕೊಳ್ಳಲಾಯಿತು.. ಇದೀಗ ಉತ್ತರಪ್ರದೇಶದಲ್ಲಿ 4.05 ಕೋಟಿ ರೂ. ಮೊತ್ತದ ಬಾಕಿ ಸಾಲದ ಮೊತ್ತವನ್ನು ತೀರಿಸಲಾಗಿದೆ ’’ ಎಂದು ಅಮಿತಾಭ್ ತನ್ನ ಬ್ಲಾಗ್ನಲ್ಲಿ ತಿಳಿಸಿದ್ದಾರೆ.