ಪಾಕ್ ಸೇನೆ ಹೇಡಿ: ಅಮರೀಂದರ್ ಸಿಂಗ್
ಅಮೃತಸರ, ನ. 26: ಚಾರಿತ್ರಿಕ ಕರ್ತಾರ್ಪುರ ಕಾರಿಡರ್ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪಾಕಿಸ್ತಾನದ ಆಹ್ವಾನ ತಿರಸ್ಕರಿಸಿರುವ ದಿನದ ಬಳಿಕ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೋಮವಾರ ಪಾಕಿಸ್ತಾನ ಸೇನೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಂಜಾಬ್ನಲ್ಲಿ ಭಯೋತ್ಪಾದಕ ದಾಳಿ ಹಾಗೂ ಭಾರತೀಯ ಯೋಧರ ಹತ್ಯೆ ಉಲ್ಲೇಖಿಸಿದ ಸಿಂಗ್, ನಾನು ನಿಮಗೆ (ಪಾಕಿಸ್ತಾನದ ಸೇನಾ ವರಿಷ್ಠ ಖಮರ್ ಬಾಜ್ವಾ) ಎಚ್ಚರಿಕೆ ನೀಡುತ್ತಿದ್ದೇನೆ. ನೀವು ಇಲ್ಲಿಗೆ ಪ್ರವೇಶಿಸಲು ಹಾಗೂ ವಾತಾವರಣವನ್ನು ಹಾಳುಗೆಡವಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಪಾಕಿಸ್ತಾನದ ಕಾರ್ಯಾಚರಣೆ ಹೇಡಿತನ ಎಂದು ಹೇಳಿದ ಸಿಂಗ್, ಪಾಕಿಸ್ತಾನದ ಸೇನಾ ವರಿಷ್ಠ ಖಮರ್ ಬಾಜ್ವಾ ಅವರಲ್ಲಿ ನಾನು ಕೆಲವು ವಿಚಾರಗಳನ್ನು ಕೇಳಲು ಬಯಸುತ್ತೇನೆ. ಕದನ ವಿರಾಮ ಉಲ್ಲಂಘಿಸಬೇಕು ಹಾಗೂ ಇನ್ನೊಂದು ಬದಿಯ ಯೋಧರನ್ನು ಹತ್ಯೆಗೈಯಬೇಕು ಎಂದು ಯಾವ ಸೇನೆ ಹೇಳುತ್ತದೆ. ಪಠಾಣ್ಕೋಟ್ ಹಾಗೂ ಅಮೃತಸರದಲ್ಲಿ ದಾಳಿ ನಡೆಸಲು ಜನರನ್ನು ಕಳುಹಿಸಬೇಕು ಎಂದು ಯಾವ ಸೇನೆ ಹೇಳುತ್ತದೆ ? ಇದು ಹೇಡಿತನ ಎಂದರು.