×
Ad

ಕಾಶ್ಮೀರ: ಹೆತ್ತವರ ಕರೆಗೆ ಓಗೊಟ್ಟು ಉಗ್ರ ಸಂಘಟನೆ ತೊರೆದು ಮನೆಗೆ ಮರಳಿದ ವಿದ್ಯಾರ್ಥಿ

Update: 2018-12-02 22:17 IST

ಶ್ರೀನಗರ, ಡಿ.2: ನೋಯ್ಡಾ ಮೂಲದ ವಿವಿಯಲ್ಲಿ ಇಂಜಿನಿಯರಿಂಗ್ ಪದವಿ ಓದುತ್ತಿದ್ದು, ಬಳಿಕ ನಿಷೇಧಿತ ಐಸಿಸ್ ಸಂಘಟನೆ ಸೇರಿದ್ದ ಎನ್ನಲಾದ ಕಾಶ್ಮೀರದ ವಿದ್ಯಾರ್ಥಿಯೊಬ್ಬ ಇದೀಗ ಹೆತ್ತವರ ಕರೆಗೆ ಓಗೊಟ್ಟು ಮನೆಗೆ ಮರಳಿರುವುದಾಗಿ ವರದಿಯಾಗಿದೆ.

ಶ್ರೀನಗರದ ಖನ್ಯಾರ್ ಗ್ರಾಮದ ನಿವಾಸಿ , 20 ವರ್ಷದ ಇಹ್ತೆಶಾಂ ಬಿಲಾಲ್ ಎಂಬಾತ ನೋಯ್ಡಾದ ಶಾರದಾ ವಿವಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ. ಆದರೆ ಕಳೆದ ಅಕ್ಟೋಬರ್ ಬಳಿಕ ನಾಪತ್ತೆಯಾಗಿದ್ದ. ಕಳೆದ ತಿಂಗಳು ಬಿಲಾಲ್ ಕಪ್ಪು ಬಣ್ಣದ ಧಿರಿಸು ತೊಟ್ಟು, ಶಸ್ತ್ರ ಮತ್ತು ಐಸಿಸ್ ಧ್ವಜ ಹಿಡಿದುಕೊಂಡಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು.

  ಈ ಮಧ್ಯೆ, ಕಾಣೆಯಾಗಿರುವ ತಮ್ಮ ಪುತ್ರನನ್ನು ಹುಡುಕಿಕೊಡುವಂತೆ ಬಿಲಾಲ್‌ನ ಪೋಷಕರು ಪೊಲೀಸರಲ್ಲಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಮನೆಗೆ ಮರಳುವಂತೆ ಕುಟುಂಬದ ಸದಸ್ಯರು ಕೈಮುಗಿದು ಬೇಡಿಕೊಳ್ಳುತ್ತಿರುವ ಫೋಟೋ ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಹೆತ್ತವರ ಶವಮಂಚಕ್ಕೆ ೆ ಹೆಗಲು ನೀಡಲಾದರೂ ಮರಳಿ ಬಾ ಎಂದು ಭಾವನಾತ್ಮಕವಾಗಿ ಮನವಿ ಮಾಡಿಕೊಂಡಿದ್ದರು. ಅಲ್ಲದೆ ಕುಟುಂಬದ ಏಕೈಕ ಗಂಡು ಸಂತಾನವಾಗಿರುವ ತಮ್ಮ ಮಗನನ್ನು ಮರಳಿ ಕಳಿಸುವಂತೆ ಭಯೋತ್ಪಾದಕ ಸಂಘಟನೆಗಳಿಗೂ ಮನವಿ ಮಾಡಿಕೊಂಡಿದ್ದರು.

“ಸ್ವರ್ಗವು ಹೆತ್ತವರ ಕಾಲಡಿಯಲ್ಲಿದೆ ಎಂದು ಹೇಳುತ್ತಿರುವ ನೀವು, ಇದೀಗ ನನ್ನ ಮಗನನ್ನು ಹೆತ್ತವರ ಬಳಿಗೆ ಕಳುಹಿಸಿ ನಮ್ಮೊಂದಿಗೆ ಮತ್ತೆ ಜೀವನ ನಡೆಸಲು ಅನುವು ಮಾಡಿಕೊಡಿ” ಎಂದು ಬಿಲಾಲ್‌ನ ತಂದೆ ಮನವಿ ಮಾಡಿಕೊಂಡಿದ್ದರು.

ಇದೀಗ ಹೆತ್ತವರ ಪ್ರಾರ್ಥನೆ ಫಲಿಸಿದೆ. ರವಿವಾರ ಮಧ್ಯಾಹ್ನ ಬಿಲಾಲ್ ಮನೆಗೆ ಮರಳಿದ್ದಾನೆ. ತಕ್ಷಣ ಆತನನ್ನು ಪೊಲೀಸರ ತಂಡ ವೈದ್ಯಕೀಯ ನೆರವು ಒದಗಿಸುವ ಉದ್ದೇಶದಿಂದ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದೆ ಎಂದು ಬಿಲಾಲ್‌ನ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಕುಟುಂಬದ ಹಾಗೂ ಪೊಲೀಸರ ಸಹಾಯದಿಂದ ಓರ್ವ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ಮರಳಿ ಕರೆತರಲಾಗಿದೆ ಎಂದು ಜಮ್ಮು-ಕಾಶ್ಮೀರದ ಪೊಲೀಸರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News