ಭೀಮಾ-ಕೋರೆಗಾಂವ್ ಯುದ್ಧದ ವರ್ಷಾಚರಣೆ: ಪುಣೆ ಪೊಲೀಸರಿಂದ ಹೆಚ್ಚಿನ ಕಟ್ಟೆಚ್ಚರದ ಕ್ರಮಗಳು

Update: 2018-12-06 16:08 GMT

ಪುಣೆ,ಡಿ.6: ಮುಂದಿನ ವರ್ಷದ ಜ.1ರಂದು ಭೀಮಾ-ಕೋರೆಗಾಂವ್ ಯುದ್ಧದ 201ನೇ ವರ್ಷಾಚರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಯನ್ನು ತಡೆಯಲು ಪುಣೆ ಪೊಲೀಸರು ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

 ಈ ವರ್ಷದ ಜನವರಿಯಲ್ಲಿ ನಡೆದಿದ್ದ 200ನೇ ವರ್ಷಾಚರಣೆಯು ಹಿಂಸಾಚಾರಗಳಿಗೆ ಸಾಕ್ಷಿಯಾಗಿದ್ದು,ಓರ್ವ ವ್ಯಕ್ತಿಯು ಹತ್ಯೆಯಾಗಿದ್ದ.

ಈ ಬಾರಿ ಪರಿಸ್ಥಿತಿ ಕೈ ಮೀರಲು ಅವಕಾಶ ನೀಡದಿರಲು ನಿರ್ಧರಿಸಿರುವ ಪೊಲೀಸರು ‘ಜಯ ಸ್ತಂಭ’ವಿರುವ ಪ್ರದೇಶ ಮತ್ತು ಭೀಮಾ-ಕೋರೆಗಾಂವ ಹಾಗೂ ಸುತ್ತುಮುತ್ತಲಿನ ಗ್ರಾಮಗಳಲ್ಲಿ ಹೆಚ್ಚಿನ ಭದ್ರತೆಯನ್ನೇರ್ಪಡಿಸಲಿದ್ದಾರೆ ಎಂದು ಪುಣೆ ಗ್ರಾಮೀಣ ಎಸ್‌ಪಿ ಸಂದೀಪ ಪಾಟೀಲ್ ಅವರು ಸುದ್ದಿಗಾರರಿಗೆ ತಿಳಿಸಿದರು.

ವದಂತಿಗಳ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ನಿಗಾಯಿರಿಸಲಾಗಿದೆ ಮತ್ತು ಸಮಾಜ ವಿರೋಧಿ ಶಕ್ತಿಗಳ ಮೇಲೂ ಕಣ್ಣಿರಿಸಲಾಗಿದೆ ಎಂದರು.

ಭೀಮಾ-ಕೋರೆಗಾಂವ್‌ನಲ್ಲಿ ಮತ್ತು ಸುತ್ತುಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುವುದು. ರಾಜ್ಯ ಮೀಸಲು ಪೊಲೀಸ್ ಪಡೆ,ಗೃಹರಕ್ಷಕರು ಮತ್ತ್ತು ಜಿಲ್ಲಾಡಳಿತದ ಅಧಿಕಾರಿಗಳನ್ನು ಅಲ್ಲಿ ನಿಯೋಜಿಸಲಾಗುವುದು. ಇದು ಪಂಢರಾಪುರದಲ್ಲಿ ಆಷಾಢ ಏಕಾದಶಿಯ ದಿನ ಅಥವಾ ಕುಂಭಮೇಳದಲ್ಲಿ ಏರ್ಪಡಡಿಸಲಾಗುವ ಬಂದೋಬಸ್ತ್‌ಗೆ ಸಮವಾಗಿರುತ್ತದೆ ಎಂದರು.

ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಧನಾತ್ಮಕ ವಾತಾವರಣವನ್ನು ಸೃಷ್ಟಿಸಲು ಜಿಲ್ಲಾಡಳಿತವು ಬಯಸಿದೆ ಎಂದ ಅವರು,ಈ ಬಾರಿ ಪೊಲೀಸರ ಅನುಮತಿಯಿಲ್ಲದೆ ಆಹಾರ ಮಳಿಗೆಗಳನ್ನು ಹಾಕುವಂತಿಲ್ಲ ಮತ್ತು ಜಯ ಸ್ತಂಭದ ಬಳಿ ರ್ಯಾಲಿಗಳನ್ನು ಸಂಘಟಿಸುವವರೂ ಅದಕ್ಕಾಗಿ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದರು.

ಎಲ್ಲ ವಾಹನಗಳನ್ನು ಕಾರ್ಯಕ್ರಮ ಸ್ಥಳದಿಂದ ಎರಡು ಕಿ.ಮೀ.ದೂರವೇ ನಿಲ್ಲಿಸಲಾಗುತ್ತದೆ ಮತ್ತು ಸ್ಥಳಕ್ಕೆ ತೆರಳಲು ಬಸ್ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದರು.

ಭೀಮಾ-ಕೋರೆಗಾಂವ್ ಯುದ್ಧದಲ್ಲಿ ಬ್ರಿಟಿಷರು ಮಹಾರಾಷ್ಟ್ರದ ಪೇಶ್ವೆಗಳನ್ನು ಸೋಲಿಸಿದ್ದರು. ಬ್ರಿಟಿಷರು ಯುದ್ಧದಲ್ಲಿ ಮೃತ ಸೈನಿಕರ ಸ್ಮರಣಾರ್ಥ ಪುಣೆ-ಅಹ್ಮದ್ ನಗರ ರಸ್ತೆಯ ಪೆರ್ನೆ ಗ್ರಾಮದಲ್ಲಿ ಸ್ಮಾರಕವನ್ನು ನಿರ್ಮಿಸಿದ್ದರು. ಮಹಾರ್ ಸಮುದಾಯಕ್ಕೆ ಸೇರಿದ್ದ ಸೈನಿಕರು ಬ್ರಿಟಿಷರ ಪರವಾಗಿ ಹೋರಾಡಿದ್ದ ಹಿನ್ನೆಲೆಯಲ್ಲಿ ದಲಿತ ನಾಯಕರು ಭೀಮಾ-ಕೋರೆಗಾಂವ ಯುದ್ಧ ದಿನವನ್ನು ಆಚರಿಸುತ್ತಿದ್ದಾರೆ.

ಪೇಶ್ವೆಗಳು ಬ್ರಾಹ್ಮಣರಾಗಿದ್ದು,ಯುದ್ಧದಲ್ಲಿಯ ವಿಜಯವನ್ನು ದಲಿತರ ದೃಢತೆಯ ಸಂಕೇತವನ್ನಾಗಿ ಪರಿಗಣಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News