ಸೈಕಲ್ ಮೂಲಕ ಸಂಚರಿಸಿ ‘ಮಾದಕ ದ್ರವ್ಯದ ವಿರುದ್ಧ ಹೋರಾಡುತ್ತಿರುವ ಸೈಯ್ಯದ್ ಫೈಝಾನ್ ಅಲಿ

Update: 2018-12-12 17:07 GMT

ಭಟ್ಕಳ, ಡಿ. 12: ಮನುಷ್ಯನಲ್ಲಿ ಛಲವೊಂದಿದ್ದರೆ ಸಾಕು ತಾನು ಏನು ಬೇಕಾದರೂ ಸಾಧಿಸಬಹುದು ಎಂದು ಸಾಬೀತು ಮಾಡಲು ಹೊರಟಿರುವ ಓರಿಸ್ಸಾ ಮೂಲದ ಸೈಯ್ಯದ್ ಫೈಝಾನ್ ಅಲಿ ಸೈಕಲ್ ಸವಾರಿಯೊಂದಿಗೆ 10 ರಾಜ್ಯಗಳ ಸುಮಾರು 3500 ಕಿ.ಮೀ. ದೂರ ಕ್ರಮಿಸಿ  ಭಾರತವನ್ನು ಮಾದಕ ದ್ರವ್ಯ ಮುಕ್ತ ದೇಶವನ್ನಾಗಿ ಮಾಡಲು ಹೋರಾಡುತ್ತಿದ್ದಾರೆ.

ತನಗೆ ವಯಸ್ಸಾಯಿತು ಎಂದು ಮೂಲೆ ಸೇರದೇ ತನ್ನಿಂದ ಸಮಾಜಕ್ಕೆನಾದರೂ ನೀಡಬೇಕೆಂಬ ಹುಮ್ಮಸ್ಸಿನಿಂದ 10 ರಾಜ್ಯವನ್ನು ಸೈಕಲನಲ್ಲಿಯೇ ಕ್ರಮಿಸಿ ಮಾದಕ ದ್ರವ್ಯ ಮುಕ್ತ ಭಾರತ ಕನಸು ಹೊತ್ತು ಸಾಗುತ್ತಿರುವ ವ್ಯಕ್ತಿ ಮಂಗಳೂರು ಮೂಲಕ ಭಟ್ಕಳ ತಾಲೂಕಿಗೆ ಆಗಮಿಸಿದ್ದು ಇಲ್ಲಿನ ಸ್ಥಳಿಯ ಯುವಕರು ಅವರನ್ನು ಬಸ್ ನಿಲ್ದಾಣದ ಬಳಿ ಬರಮಾಡಿಕೊಂಡರು.

ಸೈಕನಲ್ಲಿಯೇ 10 ರಾಜ್ಯ ಸುತ್ತಿದ ವ್ಯಕ್ತಿ ಓರಿಸ್ಸಾ ರಾಜ್ಯದ ಕಟಕ್ ಮೂಲದ ಸೈಯದ್ ಫೈಝಾನ್ ಅಲಿ. 62 ವರ್ಷದ ಈ ವ್ಯಕ್ತಿ ನವೆಂಬರ 3ರಂದು ಒರಿಸ್ಸಾದಿಂದ ಸೈಕಲ್ ಜಾಥಾ ಆರಂಭಿಸಿದ್ದಾರೆ. ದುಬೈನಲ್ಲಿ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಇವರು ಸದ್ಯ ಕೆಲಸದಿಂದ ನಿವೃತ್ತಿ ಹೊಂದಿದ್ದಾರೆ.

ದೇಶದಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಆರೋಗ್ಯದ ಮೇಲೆ ಭಾರಿ ದುಷ್ಪರಿಣಾಮ ಉಂಟಾಗಿ ಮನುಷ್ಯ ಜೀವಿಸುವ ಸುತ್ತಮುತ್ತಲಿನ ವಾತಾವರಣ ಹದಗೆಡುತ್ತಿದೆ. ಇನ್ನು ಪರಿಸರ ಮಾಲಿನ್ಯಗೊಂಡಿದ್ದು ಉಸಿರಾಟದ ಸಮಸ್ಯೆ ಉಲ್ಬಣಗೊಂಡಿದ್ದ ಹಿನ್ನೆಲೆ ಮಾಲಿನ್ಯ ನಿಯಂತ್ರಣ ರಸ್ತೆ ಸುರಕ್ಷತೆಯ ಬಗ್ಗೆ ಸೈಕಲನಲ್ಲಿಯೇ ತೆರಳಿ 10 ರಾಜ್ಯದ ನಾನಾ ಜಿಲ್ಲೆ, ತಾಲೂಕು, ಗ್ರಾಮ ಹಳ್ಳಿಯಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯ ತನಕ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬೆಂಬಲ ವ್ಯಕ್ತಪಡಿದ್ದರ ಬಗ್ಗೆ ದ ಸೈಯದ್  ಸಂತಸ ವ್ಯಕ್ತಪಡಿಸಿದ್ದಾರೆ. ಇವರ ಈ ಸಾಧನೆಗೆ ಕೇರಳ ಮಲ್ಲಾಪುರನಲ್ಲಿನ ಪೊಲಿಟಿಕಲ್ ಹಾಗೂ ಇಂಜಿನಿಯರಿಂಗ ಕಾಲೇಜಿನಿಂದ ಪ್ರಶಸ್ತಿಯನ್ನು ಪುರಸ್ಕರಿಸಲಾಗಿದೆ. 

3500 ಕಿ.ಮೀ. ಕ್ರಮಿಸಿದ ವ್ಯಕ್ತಿ: ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನದಲ್ಲಿರುವ ಸೈಯದ್ ಫೈಝಾನ್ ಅಲಿ ಅವರು ಈಗಾಗಲೇ 3500 ಕಿ.ಮೀ.ರಸ್ತೆ ಸಂಚಾರ ಮಾಡಿದ್ದು ಇಲ್ಲಿಯ ತನಕ ಆಯಾಸಗೊಳ್ಳದೇ ಜಾಥಾವನ್ನು ಮುಂದುವರೆಸಿದ್ದಾರೆ. ಸದ್ಯ 1 ತಿಂಗಳು 5 ದಿನದಲ್ಲಿ ಕಟಕ್‍ನಿಂದ ಹೊರಟು ತಾಲೂಕಿಗೆ ಬಂದು ತಲುಪಿದ್ದು ಇನ್ನು ಒಂದು ತಿಂಗಳೊಳಗಾಗಿ ಸಮಯದಲ್ಲಿ ತಲುಪಲಿದ್ದಾರೆ. ಇವರ ಈ ಉದ್ದೇಶಕ್ಕೆ ಕುಟುಂಬದಿಂದಲೂ ಬೆಂಬಲವಿದ್ದು, ಈ ವೇಳೆ ಕುಟುಂಬದ ಬೆಂಬಲಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರತಿನಿತ್ಯ 130 ಕಿ.ಮೀ. ಕ್ರಮಿಸಿ ವಿಶ್ರಾಂತಿ ಪಡೆದು ಸಂಚರಿಸಲಿದ್ದಾರೆ. ಕಟಕ್‍ನಿಂದ ಹೊರಟು ಚೆನೈ, ಬೆಂಗಳೂರು, ಕನ್ಯಾಕುಮಾರಿ ಕೇರಳ, ಮಂಗಳೂರು, ಉಡುಪಿ ಕುಂದಾಪುರ ಭಟ್ಕಳಕ್ಕೆ ಬಂದು ತಲುಪಿದ್ದಾರೆ. ಒಟ್ಟು 6 ಸಾವಿರ ಕಿ.ಮೀ. ಸಂಚರಿಸುವ ಉದ್ದೇಶ ಹೊಂದಿರುವ ಇವರು ಇನ್ನು 3000 ಕಿ.ಮೀ. ಕ್ರಮಿಸಿ ತಮ್ಮ ಜಾಥಾವನ್ನು ಮುಕ್ತಾಯಗೊಳಿಸಲಿದ್ದಾರೆ. ಇವರ ಈ ಸೈಕಲ ಸಂಚಾರಕ್ಕೆ ಒರಿಸ್ಸಾ ರಸ್ತೆ ಸಂಚಾರ ಇಲಾಖೆಯಿಂದ ಪರವಾನಿಗೆ ಪಡೆದುಕೊಂಡಿದ್ದಾರೆ. ಬುಧವಾರದಂದು ಬೆಳಿಗ್ಗೆ ತಾಲುಕಿನಿಂದ ಕಾರವಾರದ ಕಡೆಗೆ ಸೈಕಲ್ ಜಾಥಾ ಮುಂದುವರೆಯಲಿದ್ದು ಅಲ್ಲಿಂದ ಗೋವಾ, ಮುಂಬೈಯಿಂದ, ನಾಗಪುರ, ರಾಯಪುರದಿಂದ ಒರಿಸ್ಸಾ ಸೇರಲಿದ್ದಾರೆ. 

ಈ ಕುರಿತು ಮಾತನಾಡಿದ ಸೈಯದ್ ಫೈಝಾನ್ ಅಲಿ 'ವಯಸ್ಸನ್ನು ಮುಂದೆ ಇಟ್ಟುಕೊಳ್ಳದೇ ನಮ್ಮಿಂದಾಗುವ ಉತ್ತಮ ಕೆಲಸವನ್ನು ನೀಡುವಲ್ಲಿ ಮನಸ್ಸು ಮಾಡಬೇಕು. ದೇಶದಲ್ಲಿ ವಾಹನ ಸಂಚಾರ ಅಧಿಕವಾಗಿದ್ದರ ಪರಿಣಾಮ ವಾಯು ಮಾಲಿನ್ಯ ಹೇರಳವಾಗಿದೆ. ಇದರ ನಿಯಂತ್ರಣಕ್ಕೆ ಯುವ ಪೀಳಿಗೆ ಮುಂದೆ ಬರಬೇಕು. ಇನ್ನು ಅತೀ ಮುಖ್ಯವಾಗಿ ವಾಹನ ಚಾಲನೆ ಮಾಡುವ ವೇಳೆ ರಸ್ತೆ ನಿಯಮ ಸೇರಿದಂತೆ ಸುರಕ್ಷತೆಯ ಬಗ್ಗೆ ಎಲ್ಲರು ಗಮನ ಹರಿಸಿ ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News