ನೇರಳಕಟ್ಟೆ: ಕೋಟ, ಶಹೀದೇ ಮಿಲ್ಲತ್ ಉಸ್ತಾದ್ ಅನುಸ್ಮರಣಾ ಸಮ್ಮೇಳನ
ಬಂಟ್ವಾಳ, ಡಿ. 18: ಅರ್ಶದೀಸ್ ಅಸೋಸಿಯೇಷನ್ ವತಿಯಿಂದ ಶೈಖುನಾ ಕೋಟ ಉಸ್ತಾದ್, ಶಹೀದೇ ಮಿಲ್ಲತ್ ಸಿಎಂ ಉಸ್ತಾದ್ ಅವರ ಅನುಸ್ಮರಣಾ ಮಹಾಸಮ್ಮೇಳನ ಹಾಗೂ ಕೇಸ್ ಡೈರಿ ಕಾರ್ಯಕ್ರಮ ಮಾಣಿ ಸಮೀಪದ ನೇರಳಕಟ್ಟೆ ಶಂಸುಲ್ ಉಲಮಾ ನಗರದ ಇಂಡಿಯನ್ ಆಡಿಟೋರಿಯಂನಲ್ಲಿ ಸೋಮವಾರ ನಡೆಯಿತು.
ದ.ಕ.ಜಿಲ್ಲಾ ಖಾಝಿ, ಸಮಸ್ತ ಕೇಂದ್ರ ಮುಶಾವರದ ಸದಸ್ಯ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸಮ್ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿಎಂ ಉಸ್ತಾದ್ ಅವರು ನಿಗೂಢವಾಗಿ ಸಾವನ್ನಪ್ಪಿ 8 ವರ್ಷಗಳು ಕಳೆದರೂ ಇಂದಿಗೂ ಕೊಲೆ ಹಾಗೂ ಸಂಚು ರೂಪಿಸಿದ ಆರೋಪಿಗಳನ್ನು ಬಂಧಿಸಲು ಕೇರಳ ಸರಕಾರ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಒಂದು ವಿಭಾಗ ಉಸ್ತಾದ್ ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸುತ್ತಾ ಬಂದರೆ, ಕೆಲವೊಂದು ಕಾಣದ ಕೈಗಳು ಪ್ರಕರಣದ ತನಿಖೆಯನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಹೇಳಿದರು.
ಪ್ರಕರಣವನ್ನು ಕೈಗೆತ್ತಿಗೊಂಡಿರುವ ಸಿಬಿಐ ತಂಡ ಸರಿಯಾಗಿ ತನಿಖೆ ಮಾಡಿಲ್ಲ. ಈ ಪ್ರಕರಣದ ಸಾಕ್ಷಿಗಳನ್ನು ನಾಶ ಪಡಿಸಿ, ಕಂಪ್ಯೂಟರ್ ತಂತ್ರಜ್ಞಾನದ ಮೂಲಕ ಕೆಲವೊಂದು ಸನ್ನಿವೇಶಗಳನ್ನು ಸೃಷ್ಠಿಸಿ, ಇದೊಂದು ಆತ್ಮಹತ್ಯೆ ಎಂದು ವರದಿ ಸಲ್ಲಿಸಿದೆ ಎಂದು ಸಂಶಯ ವ್ಯಕ್ತಪಡಿಸಿದ ಅವರು, ಉಸ್ತಾದ್ ಅವರ ಸಾವಿನ ವಿಚಾರವಾಗಿ ಸಂಬಂಧಪಟ್ಟ ವ್ಯಕ್ತಿಗಳೊಂದಿಗೆ ಯಾವುದೇ ರೀತಿಯ ಮಾಹಿತಿ ಸಿಬಿಐ ತಂಡ ಕಲೆ ಹಾಕಿಲ್ಲ. ಈ ಪ್ರಕರಣದಲ್ಲಿ ಸಿಬಿಐ, ಪೊಲೀಸ್ ಇಲಾಖೆ, ಕ್ರೈಂ ಬ್ರಾಂಚ್ ಹಾಗೂ ಸ್ಥಳೀಯ ಕಾಣದ ಕೈಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಹೇಳಿದರು.
ಉಸ್ತಾದ್ ಅವರ ಅಸಹಜ ಸಾವು ಪ್ರಕರಣವನ್ನು ಸರಕಾರದ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಕಾಸರಗೋಡುವಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಯುತ್ತಿದ್ದು, ಇಂದಿಗೆ 60 ದಿನಗಳು ಕಳೆದಿದೆ. ಅದಲ್ಲದೆ, ಸಹಿ ಅಭಿಯಾನದ ಮೂಲಕ ಆಂದೋಲನವಾಗಿ ರೂಪುಗೊಳ್ಳುತ್ತಿದೆ. ಉಸ್ತಾದ್ ಅವರ ಸಾವಿಗೆ ನ್ಯಾಯ ಸಿಗುವವರೆಗೂ ಶಾಂತಿಯುತ ಹೋರಾಟ ನಡೆಯಲಿದೆ. ಎಂದಿಗೂ ಹಿಂಜರಿಯುವ ಪ್ರಶ್ನೇಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜಾ.ಅರ್ಶದುಲ್ ಉಲೂಂ ಚಟ್ಟಂಚಾಲ್ ಇದರ ಪ್ರಾಂಶುಪಾಲ ಶೈಖುನಾ ಕೊಡುವಳ್ಳಿ ಉಸ್ತಾದ್ ದುಆಃ ನೆರವೇರಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಸ್ತ ಕೇಂದ್ರ ಮುಶಾವರದ ಉಪಾಧ್ಯಕ್ಷ ಶೈಖುನಾ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಸಮ್ಮೇಳನವನ್ನು ಉದ್ಘಾಟಿಸಿದರು.
ಕೆ.ಹಸನ್ ಅರ್ಶದಿ ಬಳ್ಳಾರೆ ಪ್ರಾಸ್ತಾವಿಸಿದರು. ಇಬ್ರಾಹಿಂ ಖಲೀಲ್ ಹುದವಿ ಕಾಸರಗೋಡ್ ಹಾಗೂ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಅವರು ಕೇಸ್ ಡೈರಿಯ ವಿವಿಧ ತನಿಖಾ ಮಜಲುಗಳ ಬಗ್ಗೆ ವಿಷಯ ಮಂಡಿಸಿದರು. ಉಸ್ತಾದ್ ರಹ್ಮತ್ತುಲ್ಲಾ ಖಾಸಿಮಿ ಮುತ್ತೇಡಂ ಅನುಸ್ಮರಣಾ ಪ್ರಭಾಷಣೆ ಮಾಡಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ದಾರುಸ್ಸಲಾಂ ಅರಬಿಕ್ ಕಾಲೇಜಿನ ಝೈನುಲ್ ಆಬಿದೀನ್ ಜಿಫ್ರಿ ತಂಙಳ್, ಸು.ಕೆ.ಕೆ ಮಾಣಿಯೂರ್, ಬಿ.ಎಚ್.ಖಾದರ್ ಬಂಟ್ವಾಳ, ಮುಹಮ್ಮದ್ ರಫೀಕ್, ಹನೀಫ್, ಬಿ.ಎಚ್.ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಉಸ್ತಾದ್ ಉಸ್ಮಾನುಲ್ ಫೈಝಿ, ಖಾಸಿಂ ದಾರಿಮಿ, ಕೆ.ಎಲ್.ಉಮರ್ ದಾರಿಮಿ, ಆದಂ ದಾರಿಮಿ, ಇಬ್ರಾಹಿಂ ಹಾಜಿ, ಅಬೂಬಕರ್ ಹಾಜಿ ಗೋಳ್ತಮಜಲು, ಐ.ಮೊಯ್ದಿನಬ್ಬ, ಮುಹಮ್ಮದ್ ರಫೀಕ್, ಉಸ್ತಾದ್ ಎಸ್.ಬಿ.ಮುಹಮ್ಮದ್ ದಾರಿಮಿ, ಮುಸ್ತಫಾ ಕೆಂಪಿ, ರಫೀಕ್ ಹುದವಿ ಕೋಲಾರ, ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ, ಅಬೂಬಕರ್ ಸಿದ್ದೀಕ್ ಜಲಾಲಿ, ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಹುಸೈನ್ ರಹ್ಮಾನಿ, ಉಸ್ಮಾನ್ ದಾರಿಮಿ, ಶಂಸುದ್ದೀನ್ ದಾರಿಮಿ, ಶಾಫಿ ದಾರಿಮಿ ಅಜ್ಜಾವರ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ತಾಜುದ್ದೀನ್ ರಹ್ಮಾನಿ, ಸೂಫಿ ಪಡೀಲ್, ರಶೀದ್ ಹಾಜಿ ಪರ್ಲಡ್ಕ, ದಾವೂದ್ ಬಪ್ಪಳಿಗೆ, ಅಶ್ರಫ್, ರಹೀಂ ಕೊಡಾಜೆ, ಹಸೈನಾರ್, ನವಾಝ್ ನೇರಳಕಟ್ಟೆ, ಬಾವಾ ಪದರಂಗಿ, ಶರೀಫ್ ಮೂಸಾ, ಖಲೀಲ್ ಉಪಸ್ಥಿತರಿದ್ದರು.
ಅರ್ಶದಿ ಅಸೋಸಿಯೇಷನ್ನ ಪದಾಧಿಕಾರಿಗಳಾದ ಅಮೀರ್ ಅರ್ಶದಿ, ನಝೀರ್ ಅರ್ಶದಿ, ಇಸ್ಮಾಯಿಲ್ ಅರ್ಶದಿ, ಶರೀಫ್ ಅರ್ಶದಿ ಹಾಜರಿದ್ದರು.
ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಕೆ.ಯು. ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ ಸ್ವಾಗತಿಸಿ, ವಂದಿಸಿದರು. ಹಸನ್ ಅರ್ಶದಿ ಬೆಳ್ಳಾರೆ ಸಹಕರಿಸಿದರು. ಸಮ್ಮೇಳಕ್ಕಿಂತ ಮೊದಲು ಅರ್ಶದೀಸ್ ಸಂಗಮ ನಡೆಯಿತು.