ಖ್ಯಾತ ಹಿನ್ನಲೆ ಗಾಯಕ ಪದ್ಮಶ್ರೀ ಹರಿಹರನ್‍ಗೆ 'ಆಳ್ವಾಸ್ ವಿರಾಸತ್-2019' ಪ್ರಶಸ್ತಿ

Update: 2018-12-19 12:03 GMT

ಮೂಡುಬಿದಿರೆ,ಡಿ.19: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ)ವು ನಡೆಸಿಕೊಂಡು ಬರುತ್ತಿರುವ ವೈಭವದ ಸಾಂಸ್ಕೃತಿಕ ಉತ್ಸವ 'ಆಳ್ವಾಸ್ ವಿರಾಸತ್' ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು ಈ ಬಾರಿ ಖ್ಯಾತ ಹಿನ್ನಲೆ ಗಾಯಕ, ಫ್ಯೂಶನ್ ಸಂಗೀತ ಸಾಧಕ ಪದ್ಮಶ್ರೀ ಹರಿಹರನ್ ಅವರಿಗೆ "ಆಳ್ವಾಸ್ ವಿರಾಸತ್-2019"ರ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದೇವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ. 

ಅವರು ಬುಧವಾರ ತನ್ನ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಜನವರಿ 4-6ರವರೆಗೆ ಮೂಡುಬಿದಿರೆಯ ಪುತ್ತಿಗೆಯಲ್ಲಿರುವ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು ನಡೆಯಲಿದ್ದು, ಸಂಸ್ಕೃತಿ ಪ್ರಿಯರಿಗೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ರಸದೌತಣ ನೀಡಲು ಭರದಿಂದ ಸಿದ್ಧತೆಗಳು ನಡೆಯುತ್ತಿವೆ. 

ಆಳ್ವಾಸ್ ವಿರಾಸತ್‍ನಲ್ಲಿ ಕಳೆದ 25 ವರ್ಷಗಳಿಂದ ಮಹೋನ್ನತ ಸಾಂಸ್ಕೃತಿಕ ಪ್ರತಿಭೆಯೊಂದನ್ನು ಗುರುತಿಸಿ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ರೂ 1ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಈ ಬಾರಿಯ ಪ್ರಶಸ್ತಿಯನ್ನು ಪಡೆಯುತ್ತಿರುವವರು ಭಾರತೀಯ ಚಲನಚಿತ್ರ ರಂಗದಲ್ಲಿ ಹಿನ್ನಲೆ ಗಾಯಕರಾಗಿ ಪ್ರಸಿದ್ಧರಾದ ಹರಿಹರ ಅನಂತ ಸುಬ್ರಮಣಿಯನ್ ಅವರು "ಹರಿಹರನ್" ಎಂದೇ ಖ್ಯಾತರು. ಗಜಲ್, ಭಕ್ತಗೀತೆ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತಗಳಲ್ಲಿ ಅಸಾಧಾರಣ ಪ್ರತಿಭೆಯಾಗಿರುವ ಹರಿಹರನ್ ತಮಿಳು, ಹಿಂದಿ, ಮಲೆಯಾಳಂ, ಕನ್ನಡ, ಮರಾಠಿ, ಭೋಜ್‍ಪುರಿ ಮತ್ತು ತೆಲುಗು ಭಾಷೆಗಳ ಚಲನಚಿತ್ರರಂಗದ ಹಿನ್ನಲೆ ಗಾಯಕರಾಗಿ ಜನಮನ ಗೆದ್ದವರು. 

ಕೇರಳದ ತಿರುವಂತಪುರದಲ್ಲಿ ಜನಿಸಿರುವ ಹರಿಹರನ್ ಅವರು ಸಂಗೀತ ಸಂಯೋಜಕರೂ ಆಗಿದ್ದು 30ಕ್ಕಿಂತಲೂ ಅಧಿಕ ಗಜಲ್ ಆಲ್ವಂಗಳನ್ನು ಬಿಡುಗಡೆ ಮಾಡಿದ್ದಾರೆ. 1996ರಲ್ಲಿ "ಕಲೋನಿಯಲ್ ಕಸಿನ್ಸ್" ಎಂಬ ಆಲ್ಬಂನ್ನು ಖ್ಯಾತ ಹಾಡುಗಾರ ಹಾಗೂ ಸಂಗೀತ ನಿರ್ದೇಶಕ ಲೆಸ್ಲಿ ಲೆವಿಸ್ ಅವರೊಂದಿಗೆ ತಯಾರಿಸಿ ಫ್ಯೂಶನ್ ಸಂಗೀತದ ಸಾಧಕರಾಗಿಯೂ ಹೊರಹೊಮ್ಮಿದ್ದಾರೆ.

ಹರಿಹರನ್ ಅವರ ಸಂಗೀತ ಪ್ರತಿಭೆಗೆ 2004ರಲ್ಲಿ ಭಾರತದ ಉನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿ ಸಂದಿದೆ. ಅನುಮಲಿಕ್ ಸಂಯೋಜನೆಯ ಬಾರ್ಡರ್ ಸಿನಿಮಾದ "ಮೇರೆ ದುಶ್ಮನ್ ಮೇರೆ ಭಾಯಿ" ಹಾಗೂ ಅಜಯ್ ಅತುಲ್ ಸಂಯೋಜನೆಯ ಮರಾಠಿ ಚಿತ್ರ "ಜೋಗ್ವಾ"ದ "ಜೀವ್ ರಾಂಗ್ಳ" ಹಾಡುಗಳಿಗೆ ಎರಡು ಬಾರಿ ರಾಷ್ಟ್ರೀಯ ಪುರಸ್ಕಾರ ಸಹಿತ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆಂದು ತಿಳಿಸಿದ್ದಾರೆ.

ಆಳ್ವಾಸ್‍ನ ಪಿಆರ್‍ಒ ಡಾ/ಪದ್ಮನಾಭ ಶೆಣೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News