ಉಳ್ಳಾಲ: ಮದನಿ ಅಲುಮ್ನಿ ಅಸೋಸಿಯೇಶನ್ನ ಕಚೇರಿ ಉದ್ಘಾಟನೆ
ಉಳ್ಳಾಲ, ಜ.13: ಇಲ್ಲಿನ ಅಳೇಕಲ ಮದನಿ ವಿದ್ಯಾಸಂಸ್ಥೆಯ ಹಳೆ-ವಿದ್ಯಾರ್ಥಿಗಳು ಹಾಗೂ ನಿವೃತ್ತ ಶಿಕ್ಷಕರ ಸಂಘ ‘ಮದನಿ ಅಲುಮ್ನಿ ಅಸೋಸಿಯೇಶನ್’ನ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮವು ಶುಕ್ರವಾರ ಸಂಸ್ಥೆಯ ವಠಾರದಲ್ಲಿ ಜರುಗಿತು.
ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ನೂತನ ಕಚೇರಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸುದೀರ್ಘ ಇತಿಹಾಸವಿರುವ ಅಳೇಕಲದ ಮದನಿ ವಿದ್ಯಾಸಂಸ್ಥೆಯ ಸಹಸ್ರಾರು ಹಳೆವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿದ್ದು, ಅವರೆಲ್ಲ ಒಗ್ಗೂಡಿ ವಿದ್ಯಾಸಂಸ್ಥೆಗೆ ಪೂರಕವಾಗಿ ಬಲಿಷ್ಠವಾದ ಅಲುಮ್ನಿ ಹುಟ್ಟುಹಾಕಿದ್ದು ಸಂತಸದ ವಿಚಾರ. ಮುಂದಿನ ದಿನಗಳಲ್ಲಿ ಪೂರ್ವ ವಿದ್ಯಾರ್ಥಿಗಳು ಹಾಗೂ ನಿವೃತ್ತ ಶಿಕ್ಷಕರು ಸಂಸ್ಥೆಯ ಸರ್ವ ತ್ತೋಮುಖ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಈ ಕಚೇರಿಯು ಅನುಕೂಲವಾಗಿದೆ ಎಂದರು.
ಸಂಸ್ಥೆಯ ಪ್ರೌಢಶಾಲಾ ವಿಭಾಗದ ನಿವೃತ್ತ ಮುಖ್ಯ ಶಿಕ್ಷಕ ಶಾಹುಲ್ ಹಮೀದ್ ಮಲಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಂಸ್ಥೆಯ ನಿವೃತ್ತ ಶಿಕ್ಷಕರು, ಹಾಲಿ ಶಿಕ್ಷಕರು, ಹಳೆ ವಿದ್ಯಾರ್ಥಿಗಳ ‘ಸ್ನೇಹ ಸಮ್ಮಿಲನ’ವೂ ನಡೆಯಿತು.
ಹಳೆ ವಿದ್ಯಾರ್ಥಿ ಸಂಘದ ಲಾಂಛನವನ್ನು ನಿವೃತ್ತ ಶಿಕ್ಷಕಿ ವೆಂಕಟೇಶ್ವರಿ ಮತ್ತು ಶಿಕ್ಷಕಿ ಆಯಿಶಾಬಾನು ಹಾಗೂ ಫೇಸ್ಬುಕ್ ಪೇಜ್ನ್ನು ಹಳೆ ವಿದ್ಯಾರ್ಥಿಗಳಾದ ಅಬ್ಬಾಸ್ ಇಬ್ರಾಹಿಂ ಮಂಚಿಲ ಮತ್ತು ರಫೀಕ್ ಕೋಟ್ ಅನಾವರಣಗೊಳಿಸಿದರು.
ಸಂಘದ ಗೌರವ ಸಲಹೆಗಾರರಾದ ನಿವೃತ್ತ ಶಿಕ್ಷಕ ಕಮಲಾಕ್ಷ ಮಾತನಾಡಿ ನಾಡಿನ ನಾನಾ ಭಾಗಗಳಲ್ಲಿ ನೆಲೆಸಿರುವ ಈ ಸಂಸ್ಥೆಯ ಹಳೆವಿದ್ಯಾರ್ಥಿಗಳ ಕೂಡುವಿಕೆಯಿಂದ ಸಂಘ ಬಲಿಷ್ಠವಾಗಿದೆ. ಸಂಘದ ಪರವಾಗಿ ವಿದ್ಯಾ ಸಂಸ್ಥೆಗೆ ಸುಸಜ್ಜಿತ ರಂಗಮಂಟಪ ಹಾಗೂ ಸುಮಾರು 3,000 ಚದರ ಅಡಿ ಒಳಾಂಗಣಕ್ಕೆ ಇಂಟರ್ಲಾಕ್ ಅಳವಡಿಕೆಯು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದರು.
ಈ ಸಂದರ್ಭ ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಜಯಂತಿ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಇಬ್ರಾಹೀಂ ಪಿ. ನಿವೃತ್ತ ಶಿಕ್ಷಕರಾದ ಯೋಗೀಶ್ ರಾವ್, ಸರೋಜಾ, ಸುಜಾತಾ, ಲೋಕನಾಥ ರೈ, ಉಮಾವತಿ, ಇಶ್ರತ್ ಯಾಸ್ಮಿನ್, ಹಳೆ ವಿದ್ಯಾರ್ಥಿಗಳಾದ ಸುರೇಖಾ, ರಫೀಕ್ ಹಮೀದ್, ಸೈಯದ್ ತಾಹಿರ್ ಮಾತನಾಡಿದರು.
ಕಾಲೇಜಿನ ಉಪ ಪ್ರಾಂಶುಪಾಲ ಟಿ. ಇಸ್ಮಾಯೀಲ್ ಸಮಾರೋಪ ಭಾಷಣಗೈದರು ಸಂಘದ ಸಂಘಟನಾ ಕಾರ್ಯದರ್ಶಿ ಮಂಗಳೂರ ರಿಯಾಝ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕಾಸಿಂ, ಕಾರ್ಯದರ್ಶಿ ಪಂಡಿತ್ ಮುಹಮ್ಮದ್, ಸಂಚಾಲಕ ಯು.ಎನ್. ಇಬ್ರಾಹೀಂ, ಜೊತೆ ಕಾರ್ಯದರ್ಶಿ ಹಾಜಿ ಎ.ಎ. ಖಾದರ್, ಸದಸ್ಯರಾದ ಯು.ಎನ್. ಅಹ್ಮದ್, ಯು.ಎ. ಬಾವಾ ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಫೀಕ್ ಕಲ್ಕಟ್ಟ ಸಂಘದ ಗೀತೆಯನ್ನು ಹಾಡಿದರು. ಹಳೆ ವಿದ್ಯಾರ್ಥಿಗಳದ ರಾಜೇಶ್ ಗಟ್ಟಿ ಪಿಲಾರು ಸ್ವಾಗತಿಸಿದರು. ಡಾ.ಸಂಗೀತಾ ವಂದಿಸಿದರು.