ಜ.27: ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕೌನ್ಸಿಲ್ ಆಶ್ರಯದಲ್ಲಿ ಘೋಷಣಾ ಸಮಾವೇಶ

Update: 2019-01-13 14:19 GMT

ಕಡಬ, ಜ.12. ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕೌನ್ಸಿಲ್ ಆಶ್ರಯದಲ್ಲಿ ಬೃಹತ್ ಘೋಷಣಾ ಸಮಾವೇಶವು ಬೆಂಗಳೂರಿನ ಹಜ್ ಕಮಿಟಿ ವಠಾರದಲ್ಲಿ ಜ.27ರಂದು ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕೌನ್ಸಿಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯ್ಯದ್ ಮೀರಾ ಸಾಹೇಬ್ ಹೇಳಿದರು.

ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಜಮಾಅತ್ ಕೌನ್ಸಿಲ್ ಮುಸ್ಲಿಂ ಸಮುದಾಯದ ಅತ್ಯಂತ ಬಲಿಷ್ಠವಾದ ಒಂದು ಆಡಳಿತ ಘಟಕವಾಗಿದೆ. ಮೊಹಲ್ಲಾ ಜಮಾಅತ್‍ಗಳು ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಲ್ಲಿ, ಸಮುದಾಯವನ್ನು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಪಡಿಸಲು ಸಾಧ್ಯ. ಆದರೆ ಇಂದು ಬಹುತೇಕ ಮೊಹಲ್ಲಾಗಳು ಅನೇಕ ರೀತಿಯ ಸಮಸ್ಯೆಗಳ ಸುಳಿಯಲ್ಲಿವೆ. ಆಂತರಿಕ ಬಿಕ್ಕಟ್ಟು, ಆರ್ಥಿಕ ಬಿಕ್ಕಟ್ಟು, ಅನಗತ್ಯ ಗೊಂದಲಗಳು ಮುಂತಾದವುಗಳಿಂದ ಸಮುದಾಯದ ಇತರ ಜನಾಂಗಗಳ ಮಧ್ಯೆ ತಲೆ ತಗ್ಗಿಸುವಂತಾಗಿದೆ. ಸರಿಯಾದ ತರಬೇತಿ ನೀಡಿ ಮೊಹಲ್ಲಾ ಆಡಳಿತದಲ್ಲಿ ಸುಧಾರಣೆ, ಜಮಾಅತ್‍ಗಳ ಧಾರ್ಮಿಕತೆ, ಶೈಕ್ಷಣಿಕ ಪ್ರಗತಿ, ಸಮುದಾಯಕ್ಕೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಸರಿಯಾದ ರೀತಿ ಯಲ್ಲಿ ಪಡೆದು ಬಳಸಿಕೊಳ್ಳುವುದು ಮುಂತಾದ ಉದ್ದೇಶಗಳನ್ನಿಟ್ಟುಕೊಂಡು ಸಂಘಟನೆ ಮುಖಾಂತರ ರಾಜ್ಯಾದ್ಯಂತ ಕಾರ್ಯ ಚಟುವಟಿಕೆ ಮಾಡಲಾಗು ತ್ತಿದೆ. ಕೆಲವು ಸುಧಾರಣೆಗಳಿಗಾಗಿ ರಾಜ್ಯ ಮಟ್ಟದ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲು ಬೆಂಗಳೂರಿನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.

ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರ, ಉಡುಪಿ ಜಿಲ್ಲಾ ಖಾಝಿ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆಂದು ಸಯ್ಯದ್ ಮೀರಾ ಸಾಹೇಬ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಜಮಾಅತ್ ಜಿಲ್ಲಾ ಉಪಾಧ್ಯಕ್ಷ ಸಯ್ಯದ್ ಶಾಹುಲ್ ಹಮೀದ್ ತಂಙಳ್, ಎಸ್ಸೆಸ್ಸೆಫ್ ಕಡಬ ಘಟಕದ ಅಧ್ಯಕ್ಷ ಮಹಮ್ಮದ್ ರಿಯಾಝ್ ಸಅದಿ, ಉಪಾಧ್ಯಕ್ಷ ಅಬ್ದುಲ್ ಮಜೀದ್ ಸಖಾಫಿ ಮಲ್ಲಿ, ಸುನ್ನಿ ಯುವಜನ ಸಂಘದ ಕಡಬ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸೀರ್ ಸಅದಿ, ಕೂರ ಮಸೀದಿ ಅಧ್ಯಕ್ಷ ಕೆ.ಅಬೂಬಕ್ಕರ್, ಎಸ್.ಜೆ.ಎಂ. ಕಡಬ ಅಧ್ಯಕ್ಷ ಸಂಶುದ್ದಿನ್ ಸಅದಿ, ಎಸ್.ವೈ.ಎಸ್. ಮಾಣಿ ಘಟಕದ ಪ್ರಧಾನ ಕಾರ್ಯದರ್ಶಿ ಯೂಸುಫ್ ಸಯ್ಯದ್, ಕಳಾರ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಡ್ಕಾಡಿ, ಕಡಬ ಕೇಂದ್ರ ಜುಮಾ ಮಸೀದಿ ಉಪಾಧ್ಯಕ್ಷ ಆದಂ ಕುಂಡೋಳಿ, ಮಹಮ್ಮದ್ ನವಾಝ್ ಪನ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News