ರಫೇಲ್ ತೀರ್ಪು ಪರಿಶೀಲನೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಆಪ್ ಸಂಸದ
Update: 2019-01-14 15:09 GMT
ಹೊಸದಿಲ್ಲಿ,ಜ.14: ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳನ್ನು ತಿರಸ್ಕರಿಸಲಾಗಿರುವ ತೀರ್ಪನ್ನು ಪರಿಶೀಲಿಸುವಂತೆ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಒಪ್ಪಂದವನ್ನು ಪ್ರಶ್ನಿಸಿ ಹಾಕಲಾಗಿದ್ದ ನಾಲ್ಕು ಅರ್ಜಿಗಳನ್ನು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದ ಪೀಠ ಡಿಸೆಂಬರ್ 14ರಂದು ತಳ್ಳಿ ಹಾಕಿತ್ತು.
ರಫೇಲ್ ಒಪ್ಪಂದವನ್ನು ಪ್ರಶ್ನಿಸಿ ಸಿಂಗ್, ನ್ಯಾಯವಾದಿ ಎಂ.ಎಲ್ ಶರ್ಮಾ, ವಿನೀತ್ ದಂಡ, ಬಿಜೆಪಿಯ ಮಾಜಿ ನಾಯಕರಾದ ಅರುಣ್ ಶೌರಿ ಮತ್ತು ಯಶವಂತ್ ಸಿನ್ಹಾ ಹಾಗೂ ನ್ಯಾಯವಾದಿ ಪ್ರಶಾಂತ್ ಭೂಷಣ್ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಆಪ್ ನ ರಾಜ್ಯಸಭಾ ಸದಸ್ಯರಾಗಿರುವ ಸಂಜಯ್ ಸಿಂಗ್ ವಕೀಲ ಧೀರಜ್ ಕುಮಾರ್ ಸಿಂಗ್ ಮತ್ತು ಮೃನಾಲ್ ಕುಮಾರ್ ಅವರ ಮೂಲಕ ಪರಿಶೀಲನೆ ಅರ್ಜಿಯನ್ನು ಸಲ್ಲಿಸಿದ್ದಾರೆ.