ಅತ್ತೂರು ಸಂತ ಲಾರೆನ್ಸ್ ಬಸಿಲಿಕ ವಾರ್ಷಿಕೋತ್ಸವದ ಪೂರ್ವಭಾವೀ ಸಭೆ

Update: 2019-01-16 12:54 GMT

ಕಾರ್ಕಳ, ಜ. 16 : ಇತಿಹಾಸ ಪ್ರಸಿದ್ಧ ಅತ್ತೂರು ಸಂತ ಲಾರೆನ್ಸ್ ಬಸಿಲಿಕ ವಾರ್ಷಿಕೋತ್ಸವದ ಸಿದ್ಧತೆಯ ಪ್ರಯುಕ್ತ ವಿವಿಧ ಇಲಾಖೆಗಳ ಅಧಿಕಾರಗಳ ಪೂರ್ವಭಾವೀ ಸಭೆಯು ಅತ್ತೂರು ಸಂತಲಾರೆನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆಯಿತು.

ಸಂತ ಲಾರೆನ್ಸ್ ಧರ್ಮಕೇಂದ್ರದ ಪಾಲನಾ ಮಂಡಳಿ ಉಪಾಧ್ಯಕ್ಷ ಜೋನ್ ಡಿಸಿಲ್ವ  ಮಾತನಾಡಿ, ವಾರ್ಷಿಕ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ 
ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ. ಭದ್ರತೆಯ ಹಿತಾದೃಷ್ಟಿಯಿಂದ 64 ಸಿಸಿ ಕ್ಯಾಮರಾ, ಹೋಂ- ಗಾರ್ಡ್-9 ಹಾಗೂ ಸೇನಾ ಪಡೆ-300 ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೇ ಕಾರ್ಯಕ್ರಮದಲ್ಲಿ ವಿವಿಧ ಚರ್ಚ್‍ಗಳ 400 ಧರ್ಮಗುರುಗಳು ಭೇಟಿ ನೀಡಲಿದ್ದಾರೆ ಎಂದರು. ಗ್ರಾಮಾಂತರ ಪಿಎಸ್‍ಐ ಪೊಲೀಸ್ ಅಧಿಕಾರಿ ನಾಸೀರ್ ಹುಸೇನ್ ಮಾತಾನಾಡಿ, ಅಪರಾಧಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಬಾರಿ ವಿಶೇಷವಾಗಿ ಕಾರ್ಯನಿರ್ವಹಿಸಲಿದ್ದೇವೆ. ಅದಕ್ಕಾಗಿ ವಿಶೇಷವಾಗಿ 150 ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು. 

ತಾಲೂಕು ಆರೋಗ್ಯ ಅಧಿಕಾರಿ ಕೃಷ್ಣಾನಂದ ಶೆಟ್ಟಿ ಮಾತನಾಡಿ, ಅಗತ್ಯ ತುರ್ತು ಚಿಕಿತ್ಸೆಗೆ ಬೇಕಾದ ಸಂದರ್ಭದಲ್ಲಿ ಇಲಾಖೆ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ದಿನದ 24 ಗಂಟೆಯಲ್ಲೂ ತುರ್ತು ಚಿಕಿತ್ಸಾ ವಾಹನ ಸಿದ್ದವಿದ್ದು ವೈದ್ಯರು ಶ್ರಶೂಷಕಿಯರು ಕರ್ತವ್ಯ ನಿರ್ವಹಿಸಲಿದ್ದಾರೆ.

ಗ್ರಾ.ಪಂ. ಪಿಡಿಒ ಮಾಧವರಾವ್ ದೇಶಪಾಂಡೆ ಮಾತನಾಡಿ, ಗ್ರಾ.ಪಂ. ವತಿಯಿಂದ ಎಲ್ಲಾ ರೀತಿಯ ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ ಎಂದರು. 

ಧೂಳಿನಿಂದ ಕಾಯಿಲೆ ಬರುವ ಸಾಧ್ಯತೆಯಿರುವುದರಿಂದ ರಸ್ತೆಗೆ ನೀರು ಸಿಂಪಡಿಸುವ ಯೋಜನೆಯನ್ನು ದಿನಕ್ಕೆ ಮೂರು ಬಾರಿ ಗ್ರಾ.ಪಂ. ಮತ್ತು ಚರ್ಚ್ ವತಿಯಿಂದ ನಡೆಸುವಂತೆ ಸೂಚಿಸಲಾಯಿತು. ಅಂಗಡಿ ಮುಂಗಟ್ಟ ಹರಾಜು ನಡೆಸುವ ವೇಳೆ ಟ್ರಾನ್ಸ್-ಫಾರ್ಮರ್ ಕೆಳಗಡೆ ಹಾಗೂ ಎಚ್.ಟಿ ಮತ್ತು ಎಲ್.ಟಿ ವಿದ್ಯುತ್ ತಂತಿಗಳು ಹಾದುಹೋಗುವ  ಕೆಳಗಡೆ ಯಾವುದೇ ಅಂಗಡಿಗಳಿಗೆ ಅಳವಡಿಕೆಗೆ ಹರಾಜು ಸಂದರ್ಭ ಅವಕಾಶ ನೀಡಬಾರದು ಎಂದು ಮೆಸ್ಕಾಂ ವಿಭಾಗದ ಅಧಿಕಾರಿ ದಿಲೀಪ್ ತಿಳಿಸಿದರು. 

ಜನರೇಟರ್‍ಗಳ ಬಳಕೆ ಸಂದರ್ಭ ವಿದ್ಯುತ್ ಕೇಬಲ್‍ಗಳನ್ನು ರಸ್ತೆಯಲ್ಲಿ ಹಾದು ಬೀಡಲಾಗುತ್ತಿದ್ದು, ಪರಿಣಾಮ ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು. 

ಅಗ್ನಿಯಿಂದ ಯಾವುದೇ ದುರ್ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವನ್ನು ಅಗ್ನಿಶಾಮಕ ಇಲಾಖೆಯಿಂದ ತೆಗೆದುಕೊಳ್ಳಲಾಗಿದ್ದು, ರಕ್ಷಣೆಗಾಗಿ ಅಗ್ನಿಶಾಮಕ ದಳದ ಒಂದು ವಾಹನವನ್ನು ಚರ್ಚ್ ಆವರಣದೊಳಗೆ ನಿಲ್ಲಿಸುವಂತೆ ಸೂಚಿಸಲಾಯಿತು. 

ನಿಟ್ಟೆ ಗ್ರಾ.ಪಂ.ಅಧ್ಯಕ್ಷೆ ಸಬಿತಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸುಭಾಶ್ಚಂದ್ರ ಹೆಗ್ಡೆ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News