ನಿಮ್ಮೊಂದಿಗೆ ನಾವಿದ್ದೇವೆ ಜೇಟ್ಲಿ: ರಾಹುಲ್ ಗಾಂಧಿ

Update: 2019-01-16 16:04 GMT

ಹೊಸದಿಲ್ಲಿ, ಜ. 16: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವೈದ್ಯಕೀಯ ಕಾರಣದ ಹಿನ್ನೆಲೆಯಲ್ಲಿ ಇದ್ದಕ್ಕಿದ್ದಂತೆ ಅಮೆರಿಕಕ್ಕೆ ತೆರಳಿದ್ದಾರೆ. ಇದು ರಾಜಕೀಯ ವಲಯದಲ್ಲಿ ವದಂತಿಗೆ ಕಾರಣವಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಜೇಟ್ಲಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಹಾಗೂ ಆದಷ್ಟು ಬೇಗ ಗುಣಮಖರಾಗುವಂತೆ ಹಾರೈಸಿದ್ದಾರೆ.

ಕಳೆದ ವರ್ಷ ಕಿಡ್ನಿ ಕಸಿ ಮಾಡಿಕೊಂಡ ಬಳಿಕ ಜೇಟ್ಲಿ ಅವರು ಅಮೆರಿಕಕ್ಕೆ ತೆರಳುತ್ತಿದ್ದಾರೆ. ಈ ಬೆಳವಣಿಗೆಯನ್ನು ದೃಢಪಡಿಸಿರುವ ಹಣಕಾಸು ಸಚಿವಾಲಯದ ವಕ್ತಾರ, ಅವರು ಈ ವಾರಾಂತ್ಯದೊಳಗೆ ಹಿಂದಿರುಗಲಿದ್ದಾರೆ ಎಂದು ಹೇಳಿದ್ದಾರೆ. “ಅರುಣ್ ಜೇಟ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂಬುದು ತಿಳಿದು ನಾನು ಖಿನ್ನನಾದೆ. ನಾವು ಅವರ ಸಿದ್ಧಾಂತಗಳೊಂದಿಗೆ ದಿನನಿತ್ಯ ಹೋರಾಟ ಮಾಡುತ್ತೇವೆ. ಆದಾಗ್ಯೂ, ಅವರು ಶೀಘ್ರ ಗುಣಮುಖವಾಗಲಿ ಎಂದು ನಾನು ಮತ್ತು ಕಾಂಗ್ರೆಸ್ ಪಕ್ಷ ಹಾರೈಸುತ್ತದೆ. ಈ ಸಂಕಷ್ಟದ ಸಮಯದಲ್ಲಿ ಜೇಟ್ಲಿ ಹಾಗೂ ಅವರ ಕುಟುಂಬದೊಂದಿಗೆ ನಾವಿದ್ದೇವೆ” ಎಂದು ರಾಹುಲ್ ಗಾಂಧಿ ಬುಧವಾರ ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿಯವರೊಂದಿಗೆ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಶಿದ್, ಎನ್‌ಸಿ ನಾಯಕ ಉಮರ್ ಅಬ್ದುಲ್ಲಾ ಹಾಗೂ ಇತರರು ಜೇಟ್ಲಿ ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News