ಕರ್ತಾರ್ಪುರ ಕಾರಿಡಾರ್ ಕರಡು ಒಪ್ಪಂದ ಭಾರತಕ್ಕೆ ನೀಡಿದ ಪಾಕ್
Update: 2019-01-22 16:55 GMT
ಇಸ್ಲಾಮಾಬಾದ್, ಜ. 22: ಕರ್ತಾರ್ಪುರ ಕಾರಿಡಾರ್ ಮೂಲಕ ಗುರುದ್ವಾರ ದರ್ಬಾರ್ ಸಾಹಿಬ್ಗೆ ಭೇಟಿ ನೀಡಬಯಸುವ ಭಾರತೀಯ ಪ್ರವಾಸಿಗಳು ಅನುಸರಿಸಬೇಕಾದ ವಿಧಿವಿಧಾನಗಳ ಕುರಿತ ಕರಡು ಒಪ್ಪಂದವೊಂದನ್ನು ಪಾಕಿಸ್ತಾನ ಸರಕಾರ ಸೋಮವಾರ ಭಾರತ ಸರಕಾರಕ್ಕೆ ನೀಡಿದೆ.
ಗುರುದ್ವಾರಕ್ಕೆ ಭಾರತೀಯ ಸಿಖ್ ಯಾತ್ರಿಕರ ಭೇಟಿಗೆ ಅವಕಾಶ ಕಲ್ಪಿಸುವ ಕರಡು ಒಪ್ಪಂದವನ್ನು ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಶನ್ಗೆ ಹಸ್ತಾಂತರಿಸಲಾಗಿದೆ ಎಂದು ಪಾಕಿಸ್ತಾನ ವಿದೇಶ ಕಚೇರಿಯ ಹೇಳಿಕೆಯೊಂದು ತಿಳಿಸಿದೆ.
ಈ ವರ್ಷ ನವೆಂಬರ್ನಲ್ಲಿ ನಡೆಯಲಿರುವ ಗುರು ನಾನಕರ 550ನೇ ಜಯಂತಿಯ ಸಂದರ್ಭದಲ್ಲಿ ಕಾರಿಡಾರನ್ನು ತೆರೆಯುವ ಪ್ರಧಾನಿ ಇಮ್ರಾನ್ ಖಾನ್ರ ಬದ್ಧತೆಗೆ ಪೂರಕವಾಗಿ ಕರಡು ಒಪ್ಪಂದವನ್ನು ರಚಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಮಾತುಕತೆ ನಡೆಸಿ ಒಪ್ಪಂದವನ್ನು ಅಂತಿಮಗೊಳಿಸಲು ಇಸ್ಲಾಮಾಬಾದ್ಗೆ ನಿಯೋಗವೊಂದನ್ನು ತುರ್ತಾಗಿ ಕಳುಹಿಸುವಂತೆಯೂ ಪಾಕಿಸ್ತಾನ ಭಾರತವನ್ನು ಕೋರಿದೆ ಎಂದಿದೆ.