×
Ad

ಹೌದು, 2014ರಲ್ಲಿ ಬಿಜೆಪಿ ನನ್ನನ್ನು ಬಳಸಿಕೊಂಡಿತ್ತು: ಅಣ್ಣಾ ಹಝಾರೆ

Update: 2019-02-04 18:55 IST

ಅಹ್ಮದ್‌ನಗರ(ಮಹಾರಾಷ್ಟ್ರ),ಫೆ.4: “ಬಿಜೆಪಿಯು 2014ರ ಲೋಕಸಭಾ ಚುನಾವಣೆಗಳಲ್ಲಿ ಗೆಲ್ಲಲು ನನ್ನನ್ನು ಬಳಸಿಕೊಂಡಿತ್ತು” ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಝಾರೆ ಅವರು ಸೋಮವಾರ ಹೇಳಿದರು. ಲೋಕಪಾಲ ಮತ್ತು ಲೋಕಾಯುಕ್ತರ ನೇಮಕಗಳಿಗಾಗಿ ಆಗ್ರಹಿಸಿ ಅವರು ಕೈಗೊಂಡಿರುವ ಅನಿರ್ದಿಷ್ಟಾವಧಿ ನಿರಶನ ಸತ್ಯಾಗ್ರಹವು ಸೋಮವಾರ ಆರನೇ ದಿನಕ್ಕೆ ಕಾಲಿರಿಸಿದೆ.

ತನ್ನ ಸ್ವಗ್ರಾಮ ರಾಲೆಗಣ ಸಿದ್ಧಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಹಝಾರೆ, “ಹೌದು,2014ರಲ್ಲಿ ಬಿಜೆಪಿ ನನ್ನನ್ನು ಬಳಸಿಕೊಂಡಿತ್ತು.

ಲೋಕಪಾಲ ನೇಮಕಕ್ಕಾಗಿ ನನ್ನ ಆಂದೋಲನವು ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿಯನ್ನು ಅಧಿಕಾರಕ್ಕೇರಿಸಿತ್ತು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು. ನನಗೀಗ ಅವರ ಬಗ್ಗೆ ಯಾವುದೇ ಗೌರವವುಳಿದಿಲ್ಲ” ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಜನರನ್ನು ದಾರಿ ತಪ್ಪಿಸುತ್ತಿದೆಯಷ್ಟೇ. ಅದು ದೇಶವನ್ನು ಸರ್ವಾಧಿಕಾರದತ್ತ ಒಯ್ಯುತ್ತಿದೆ ಎಂದ ಅವರು,ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರಕಾರವು ಕಳೆದ ನಾಲ್ಕು ವರ್ಷಗಳಿಂದಲೂ ಸುಳ್ಳುಗಳನ್ನೇ ಹೇಳುತ್ತಿದೆ. ಇಂತಹ ಸುಳ್ಳುಗಳು ಎಷ್ಟು ಸಮಯ ಮುಂದುವರಿಯುತ್ತವೆ?, ಈ ಸರಕಾರವು ದೇಶದ ಜನರನ್ನು ನಿರಾಶೆಗೊಳಿಸಿದೆ. ತನ್ನ ಶೇ.90ರಷ್ಟು ಬೇಡಿಕೆಗಳನ್ನು ಒಪ್ಪಿಕೊಳ್ಳಲಾಗಿದೆ ಎಂಬ ರಾಜ್ಯ ಸರಕಾರದ ಹೇಳಿಕೆಯೂ ಸುಳ್ಳಾಗಿದೆ ಎಂದರು.

2011 ಮತ್ತು 2014ರಲ್ಲಿ ತನ್ನ ಆಂದೋಲನಗಳಿಂದ ಲಾಭ ಪಡೆದುಕೊಂಡಿದ್ದ ಅದೇ ಜನರು ಈಗ ತನ್ನ ಬೇಡಿಕೆಗಳಿಗೆ ಬೆನ್ನು ತಿರುಗಿಸಿದ್ದಾರೆ ಮತ್ತು ಅವುಗಳನ್ನು ಈಡೇರಿಸಲು ಕಳೆದ ಐದು ವರ್ಷಗಳಲ್ಲಿ ಏನನ್ನೂ ಮಾಡಿಲ್ಲ ಎಂದು 81ರ ಹರೆಯದ ಹಝಾರೆ ವಿಷಾದಿಸಿದರು.

ಕೇಂದ್ರ ಮತ್ತು ಮತ್ತು ರಾಜ್ಯ ಸರಕಾರಗಳ ಸಚಿವರು ತನ್ನನ್ನು ಭೇಟಿಯಾಗಿ ಬೇಡಿಕೆಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಅವರು ಹೇಳುತ್ತಲೇ ಇದ್ದಾರೆ. ಆದರೆ ಇದು ಜನರಲ್ಲಿ ಗೊಂದಲವನ್ನುಂಟು ಮಾಡುವುದರಿಂದ ತಾನು ನಿರಾಕರಿಸಿದ್ದೇನೆ. ತನಗೆ ಅವರ ಭರವಸೆಗಳಲ್ಲಿ ವಿಶ್ವಾಸವುಳಿದಿಲ್ಲ. ಅವರು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲಿ ಮತ್ತು ಪ್ರತಿಯೊಂದನ್ನೂ ತನಗೆ ಲಿಖಿತ ರೂಪದಲ್ಲಿ ನೀಡಲಿ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ತನ್ನ ಮಾಜಿ ಸಹವರ್ತಿ ಹಾಗೂ ಹಾಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತನ್ನ ಈಗಿನ ಪ್ರತಿಭಟನೆಯನ್ನು ಸೇರಲು ಸ್ವಾಗತವಿದೆ,ಆದರೆ ಅವರು ತನ್ನೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವಂತಿಲ್ಲ ಎಂದರು.

ತನ್ನ ಬೇಡಿಕೆಗಳನ್ನು ಸರಕಾರವು ಶೀಘ್ರವೇ ಈಡೇರಿಸದಿದ್ದರೆ ತನ್ನ ಪದ್ಮಭೂಷಣ ಪ್ರಶಸ್ತಿಯನ್ನು ಮರಳಿಸುವುದಾಗಿ ಹಝಾರೆ ರವಿವಾರ ಎಚ್ಚರಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News