ಕೋಟ ಡಬಲ್ ಮರ್ಡರ್ ಪ್ರಕರಣ: ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇಬ್ಬರು ಸಿಬ್ಬಂದಿಯ ಬಂಧನ

Update: 2019-02-11 06:39 GMT

ಉಡುಪಿ, ಫೆ.11: ಕೋಟದ ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ಇತ್ತೀಚೆಗೆ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇಬ್ಬರು ಸಿಬ್ಬಂದಿಯನ್ನು ಬಂಧಿಸಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಾದ ಪವನ್ ಅಮಿನ್ ಮತ್ತು ವೀರೇಂದ್ರ ಆಚಾರ್ಯ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಬ್ಬರನ್ನು ಕೊಲೆ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಇದರೊಂದಿಗೆ ಯುವಕರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಎಂಟಕ್ಕೇರಿದೆ.

ಪವನ್ ಅಮಿನ್ ಹಾಗೂ ವೀರೇಂದ್ರ ಆಚಾರ್ಯ ಅವರು ಕೊಲೆ ಪ್ರಕರಣದ ಆರೋಪಿಗಳಾದ ಕೋಟ ಠಾಣೆ ವ್ಯಾಪ್ತಿಯ ರೌಡಿಗಳಾದ ಹರೀಶ್ ರೆಡ್ದಿ, ರಾಜಶೇಖರ ರೆಡ್ಡಿ, ಮಹೇಶ ಗಾಣಿಗ, ಸಂತೋಷ ಕುಂದರ್ ಮುಂತಾದವರೊಂದಿಗೆ ಒಡನಾಟ ಹೊಂದಿದ್ದರು. ಕೊಲೆ ನಡೆದ ಜನವರಿ 26ರಂದು ರಾತ್ರಿ ಆರೋಪಿಗಳು ಅವಿತುಕೊಳ್ಳಲು ಪವನ್ ಅಮಿನ್ ಹೆಬ್ರಿಯ ಕುಚ್ಚೂರಿನಲ್ಲಿರುವ ತನ್ನ ಮನೆಯಲ್ಲಿ ಅವಕಾಶ ಕಲ್ಪಿಸಿದ್ದ. ಮರುದಿನ ಬೆಳಗ್ಗೆ ಹರೀಶ್ ರೆಡ್ಡಿಯು ಪವನ್ ಅಮಿನ್‌ಗೆ ದೂರವಾಣಿ ಕರೆ ಮಾಡಿ ಮೊಬೈಲ್ ಫೋನ್ ಮತ್ತು ಸಿಮ್ ಸಹಿತ ಕೆಲವು ಸಾಮಗ್ರಿಗಳನ್ನು ಕಳುಹಿಸಿಕೊಡುವಂತೆ ಕೇಳಿದ್ದ. ಅದರಂತೆ ಅವುಗಳನ್ನು ಪ್ರಣವ್ ಭಟ್ ಎಂಬಾತನ ಮೂಲಕ ಪವನ್ ಅಮಿನ್ ಕಳುಹಿಸಿಕೊಟ್ಟಿದ್ದ ಎಂದು ಎಸ್ಪಿ ತಿಳಿಸಿದ್ದಾರೆ.

ಜ.27ರಂದು ರಾತ್ರಿ ಪವನ್ ಅಮಿನ್ ಇನ್ನೋರ್ವ ಆರೋಪಿ ವೀರೇಂದ್ರ ಆಚಾರ್ಯನೊಂದಿಗೆ ಸೇರಿ ಕೊಲೆ ಆರೋಪಿಗಳಿಗೆ ಕಾರೊಂದನ್ನು ವ್ಯವಸ್ಥೆ ಮಾಡಿದ್ದ. ಬಳಿಕ ಆರೋಪಿಗಳನ್ನು ಆಗುಂಬೆ ಎನ್.ಆರ್.ಪುರದ ಮಲ್ಲಂದೂರಿನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಜ.28ರಂದು ಅಲ್ಲಿಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಪವನ್ ಮತ್ತು ವೀರೇಂದ್ರ ವಾಪಸ್ ಆಗುತ್ತಿದ್ದ ವೇಳೆ ಆರೋಪಿ ಹರೀಶ್ ರೆಡ್ಡಿ ಕೊಟ್ಟಿದ್ದ ಮೊಬೈಲ್ ಫೋನ್‌ ಮತ್ತು ಇತರ ವಸ್ತುಗಳನ್ನು ತಂದು ಬಚ್ಚಿಟ್ಟಿದ್ದರು ಎಂದು ಎಸ್ಪಿ ತಿಳಿಸಿದ್ದಾರೆ.

ಪವನ್ ಮತ್ತು ವೀರೇಂದ್ರ್‌ರನ್ನು ರವಿವಾರ ಬಂಧಿಸಿ ಅವರಿಂದ ಕೃತ್ಯಕ್ಕೆ ಬಳಸಿದ ಕಾರು, ಮೊಬೈಲ್ ಫೋನ್ ಸಹಿತ ಕೆಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆ.15ರ ತನಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ತಿಳಿಸಿದ್ದಾರೆ.

ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ಶೌಚಾಲಯ ಹೊಂಡದ ವಿವಾದಕ್ಕೆ ಸಂಬಂಧಿಸಿ ಭರತ್ ಕುಮಾರ್ ಮತ್ತು ಯತೀಶ್ ಎಂಬವರನ್ನು ತಂಡವೊಂದು ಜ.26ರಂದು ಕೊಲೆಗೈದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಪಂ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್, ರೌಡಿಶೀಟರ್ ರಾಜಶೇಖರ ರೆಡ್ಡಿ, ಮೆಡಿಕಲ್ ರವಿ, ಹರೀಶ್ ರೆಡ್ಡಿ, ಮಹೇಶ್ ಗಾಣಿಗ, ರವಿಚಂದ್ರ ಪೂಜಾರಿ ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದೀಗ ಇಬ್ಬರು ಪೊಲೀಸ್ ಸಿಬ್ಬಂದಿಯ ಬಂಧನದೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಒಟ್ಟು ಎಂಟಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News