'ಜನಪದ ಸಂಸ್ಕೃತಿಯ ನಂಟು ಕಡಿದುಕೊಳ್ಳುತ್ತಿರುವ ಭಾರತೀಯರು'

Update: 2019-02-11 17:32 GMT

ಮಂಗಳೂರು, ಫೆ.11: ನಮ್ಮ ಪೂರ್ವಜರು ಸಾವಿರಾರು ವರ್ಷಗಳಿಂದ ಇತಿಹಾಸದ ಜೊತೆ ನಂಟು ಬೆಸೆದುಕೊಂಡು ಬದುಕಿದ್ದರು. ಭಾರತದಲ್ಲಿ ಆಂಗ್ಲರು ಅನುಷ್ಠಾನಗೊಳಿಸಿದ ಇಂಗ್ಲಿಷ್ ಶಿಕ್ಷಣ ಪದ್ಧತಿಯು ಭಾರತೀಯರನ್ನು ಇತಿಹಾಸದಿಂದ ಬೇರ್ಪಡಿಸಿದಂತಾಗಿದೆ. ಪರಿಣಾಮವಾಗಿ ಭಾರತೀಯರು ಜನಪದ ಸಂಸ್ಕೃತಿಯ ನಂಟನ್ನೂ ಕಡಿದುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ನಗರದ ಸಂತ ಅಲೋಶಿಯಸ್ ಕಾಲೇಜಿನ ಇಂಗ್ಲಿಷ್ ಮತ್ತು ಕನ್ನಡ ವಿಭಾಗಗಳ ಸಹಯೋಗದಲ್ಲಿ ಸೋಮವಾರ ಆರಂಭವಾದ ‘ಸಾಹಿತ್ಯ ಮತ್ತು ಪರಿಸರ’ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯರು ಎಲ್ಲ ಕ್ಷೇತ್ರಗಳಲ್ಲೂ ಪರಿಸರವನ್ನು ಕೇಂದ್ರವಾಗಿ ಇಟ್ಟುಕೊಂಡು ಚಿಂತನೆ ನಡೆಸುತ್ತಿದ್ದರು. ಆದರೆ, ಇಂಗ್ಲಿಷ್ ಶಿಕ್ಷಣ ಭಾರತೀಯರಿಗೆ ಪ್ರಶ್ನಿಸುವುದನ್ನು ಮರೆಸಿದೆ. ಕೃಷಿಯ ಬಗೆಗಿನ ಜ್ಞಾನವೂ ಅರಿಸ್ಟಾಟಲ್‌ನಿಂದಲೇ ಆರಂಭವಾಯಿತು ಎಂಬ ನಂಬಿಕೆ ಬೆಳೆದಿದೆ. ಪೂರ್ವಜರು ಕಟ್ಟಿಕೊಟ್ಟ ಅಗಾಧ ಜ್ಞಾನಕ್ಕೆ ಬೆಲೆಯೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ಮಾರ್ಟಿಸ್ ಮಾತನಾಡಿ, ಪರಿಸರ ಮತ್ತು ಸಾಮಾಜಿಕ ನ್ಯಾಯದಂತಹ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವುದು ಶಿಕ್ಷಣ ಸಂಸ್ಥೆಗಳ ಕರ್ತವ್ಯವಾಗಿದೆ. ಪರಿಸರ ಎಂದಿಗೂ ವಿಶ್ರಮಿಸುವುದಿಲ್ಲ; ಮನುಷ್ಯ ಜೀವಿಯಂತೆ ಒಬ್ಬಂಟಿ ಎಂದು ಭಾವಿಸುವುದಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ಮೇಲಾಗುತ್ತಿರುವ ದಾಳಿಗಳು ಅತಿಯಾಗುತ್ತಿರುವುದು ಆತಂಕಕಾರಿ ವಿಷಯ ಎಂದು ಹೇಳಿದರು.

ಅಲೋಶಿಯಸ್ ಸಮೂಹ ಸಂಸ್ಥೆಗಳ ನಿರ್ದೇಶಕ ಡಯನಿಷಿಯಸ್ ವಾಜ್ ಮಾತನಾಡಿದರು. ಹೈದರಾಬಾದ್ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ.ಪ್ರಮೋದ್ ಕೆ.ನಾಯರ್ ದಿಕ್ಸೂಚಿ ಭಾಷಣ ಮಾಡಿದರು. ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸರಸ್ವತಿ ಅವರ ‘ಅಮೃತ ಘಳಿಗೆ’ ನಾಟಕ ಕೃತಿಯನ್ನು ಚಂದ್ರಶೇಖರ ಕಂಬಾರ ಲೋಕಾರ್ಪಣೆಗೊಳಿಸಿದರು. ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಮೆಲಿಸಾ ಎಂ. ಗೋವಿಯಸ್ ಮತ್ತು ವಿಚಾರ ಸಂಕಿರಣದ ಸಂಯೋಜಕ ಎನ್.ಗಿರೀಶ್ ಉಪಸ್ಥಿತರಿದ್ದರು.

ಅಲೋಶಿಯಸ್ ಸಾಹಿತ್ಯ ಹಬ್ಬದ ಪ್ರಯುಕ್ತ ನಾಟಕಕಾರ, ಕವಿ, ರಂಗ ನಿರ್ದೇಶಕ ರಘುನಂದನ ನೇತೃತ್ವದಲ್ಲಿ ಬುಧವಾರದಿಂದ ಶುಕ್ರವಾರದವರೆಗೆ ರಂಗಭೂಮಿ ಮತ್ತು ಕಲೆಗೆ ಸಂಬಂಧಿಸಿದ ಕಾರ್ಯಾಗಾರವನ್ನೂ ಹಮ್ಮಿಕೊಳ್ಳಲಾಗಿದೆ. ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರಿಂದ ಶನಿವಾರ ಸಂಪಾದಕೀಯ ವ್ಯಂಗ್ಯಚಿತ್ರಗಳ ರಚನೆ ಕುರಿತು ಕಾರ್ಯಾಗಾರ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News