ಹೃದಯಾಘಾತಕ್ಕೊಳಗಾದರೂ 50 ಪ್ರಯಾಣಿಕರ ಜೀವ ಉಳಿಸಿದ ಚಾಲಕ
Update: 2019-02-13 13:12 GMT
ಚೆನ್ನೈ, ಫೆ. 13: ತಿರುವಲ್ಲೂರ್ ನಿಂದ ಚೆನ್ನೈಗೆ ಸೋಮವಾರ ನಸುಕಿನ ವೇಳೆ ಸಾಗುತ್ತಿದ್ದ ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸಿನ ಚಾಲಕನಿಗೆ ಬಸ್ಸು ಚೆನ್ನೈ ಹೊರವಲಯದ ಪೂನಮಲೀ ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಹೃದಯಾಘಾತವಾದರೂ ಅಂತಹ ಗಂಭೀರ ಸ್ಥಿತಿಯಲ್ಲೂ ಸಮಯ ಪ್ರಜ್ಞೆ ತೋರಿದ ಕಾರಣ ಬಸ್ಸಿನಲ್ಲಿದ್ದ 50 ಮಂದಿಯ ಪ್ರಾಣ ಉಳಿದಿದೆ.
ಬಸ್ಸನ್ನು ರಸ್ತೆ ಬದಿಯಲ್ಲಿ ನಿಲ್ಲಿಸುತ್ತಿದ್ದಂತೆಯೇ ಚಾಲಕ ಸ್ಟೀರಿಂಗ್ ವೀಲ್ ಮೇಲೆಯೇ ಕುಸಿದಿದ್ದರು.
ವೆಲ್ಲೂರು ಜಿಲ್ಲೆಯ ಪೆರಾಂಬಟ್ಟು ಎಂಬ ಗ್ರಾಮದವರಾಗಿರುವ ರಮೇಶ್ (47) ಎಂಬ ಹೆಸರಿನ ಈ ಚಾಲಕನನ್ನು ಅಂಬುಲೆನ್ಸ್ ಮೂಲಕ ಕೂಡಲೇ ಕಿಲ್ಪಾಕ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.
ಸುದ್ದಿ ತಿಳಿಯುತ್ತಲೇ ನಿಗಮದ ಅಧಿಕಾರಿಗಳು ಬೇರೊಂದು ಚಾಲಕನನ್ನು ಕಳುಹಿಸಿದರಲ್ಲದೆ ನಂತರ ಅಗಲಿದ ಚಾಲಕನಿಗೆ ತಮ್ಮ ಅಂತಿಮ ನಮನ ಸಲ್ಲಿಸಿದರು.