ಫೆ.17ರಂದು ಮಣಿಪಾಲ ಮ್ಯಾರಥಾನ್: 10,000 ಅಥ್ಲೀಟ್‌ಗಳ ಸ್ಪರ್ಧೆ ನಿರೀಕ್ಷೆ

Update: 2019-02-15 14:17 GMT

ಉಡುಪಿ, ಫೆ. 15: ಮಣಿಪಾಲದ ಮಾಹೆ ವಿವಿ ಹಾಗೂ ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್‌ಗಳ ಜಂಟಿ ಆಶ್ರಯದಲ್ಲಿ ಫೆ.17ರ ರವಿವಾರ ಮುಂಜಾನೆ ನಡೆಯುವ ಮಣಿಪಾಲ ಮ್ಯಾರಥಾನ್‌ನ 2019ನೇ ಆವೃತ್ತಿಯಲ್ಲಿ ಹಲವು ವಿದೇಶಿ ಅಥ್ಲೀಟ್‌ಗಳು ಸೇರಿದಂತೆ 7000ಕ್ಕೂ ಅಧಿಕ ಓಟಗಾರರು ಈಗಾಗಲೇ ಹೆಸರು ನೊಂದಾಯಿಸಿಕೊಂಡಿದ್ದು, ಅಂತಿಮವಾಗಿ 10,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮ್ಯಾರಥಾನ್ ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾನಸಿಕ ಕಾಯಿಲೆ ಕುರಿತು ಜಾಗೃತಿ’ ಈ ಬಾರಿ ನಡೆಯುವ 13ನೇ ಮಣಿಪಾಲ ಮ್ಯಾರಥಾನ್‌ನ ಧ್ಯೇಯವಾಕ್ಯ. ಈಗಾಗಲೇ ಶ್ರೀಲಂಕಾದಿಂದ ಆರು ಮಂದಿ ಹಾಗೂ ಕೆನ್ಯಾದ ಎಂಟು ಮಂದಿ ಮ್ಯಾರಥಾನ್ ಓಟಗಾರರು 21ಕಿ.ಮೀ. ದೂರದ ಹಾಫ್ ಮ್ಯಾರಥಾನ್‌ನಲ್ಲಿ ಸ್ಪರ್ಧಿಸಲು ಹೆಸರು ನೊಂದಾಯಿಸಿಕೊಂಡಿದ್ದಾರೆ. ಅಲ್ಲದೇ ಜರ್ಮನಿ ಮತ್ತು ಇಥಿಯೋಪಿಯಾದ ಅಥ್ಲೀಟ್‌ಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಆಳ್ವಾಸ್, ಎಂಇಜಿ, ರೈಲ್ವೆ ತಂಡಗಳ ಖ್ಯಾತನಾಮ ಮ್ಯಾರಥಾನ್ ಓಟಗಾರರು ಈ ಬಾರಿ ಸ್ಪರ್ಧಿಸಲಿದ್ದಾರೆ. ಹಾಫ್ ಮ್ಯಾರಥಾನ್‌ನಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಕ್ರೀಡಾಪಟುಗಳು ಪ್ರಶಸ್ತಿಯೊಂದಿಗೆ ಕ್ರಮವಾಗಿ 50,000ರೂ., 30,000ರೂ. ಹಾಗೂ 15,000ರೂ. ನಗದು ಬಹುಮಾನ ಪಡೆಯಲಿದ್ದಾರೆ. ಒಟ್ಟಾರೆಯಾಗಿ 8ಲಕ್ಷ ರೂ. ನಗದು ಬಹುಮಾನವನ್ನು ವಿವಿಧ ವಿಭಾಗಗಳ ವಿಜಯಿ ಕ್ರೀಡಾಪಟುಗಳಿಗೆ ವಿತರಿಸಲಾಗುವುದು ಎಂದು ರಘುಪತಿ ಭಟ್ ತಿಳಿಸಿದರು.

ಮಣಿಪಾಲ ಮ್ಯಾರಥಾನ್‌ಗೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿದೆ. ಐಸಿಐಸಿಐ ಬ್ಯಾಂಕ್ ಈ ಬಾರಿಯ ಪ್ರಮುಖ ಪ್ರಾಯೋಜಕ ಸಂಸ್ಥೆಯಾಗಿದ್ದು, ಇದರೊಂದಿಗೆ ಸಿಂಡಿಕೇಟ್ ಬ್ಯಾಂಕ್,ಎಸ್‌ಬಿಐ ಹಾಗೂ ಭಾರತ್ ಪೆಟ್ರೋಲಿಯಂ ಇತರ ಪ್ರಾಯೋಜಕ ಸಂಸ್ಥೆಗಳಾಗಿವೆ. 2018ರ ಗೋಲ್ಡನ್ ಗ್ಲೋಬ್ ರೇಸ್‌ನಲ್ಲಿ ಭಾಗವಹಿಸಿದ ಏಷ್ಯದ ಏಕೈಕ ಸ್ಪರ್ಧಿ ಭಾರತೀಯ ನೌಕಾಪಡೆಯ ಕಮಾಂಡರ್ ಅಭಿಲಾಷ್ ಟಾಮಿ ಅವರು ಈ ಬಾರಿ ಉಪಸ್ಥಿತರಿರುವರು ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್(ಮಾಹೆ)ನ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ತಿಳಿಸಿದರು.

ಸ್ಪರ್ಧಿಗಳು 21ಕಿ.ಮೀ. ಕ್ರಮಿಸಬೇಕಾಗಿರುವ ಹಾಫ್ ಮೆರಥಾನ್‌ನ ಮಾರ್ಗವನ್ನು ಅಂತಿಮಗೊಳಿಸಲಾಗಿದೆ. ಮಣಿಪಾಲದಿಂದ ಹೊರಡುವ ಅಥ್ಲೀಟ್‌ಗಳು, ಪೆರಂಪಳ್ಳಿ ಮಾರ್ಗದಲ್ಲಿ ಸಾಗಿ, ಅಂಬಾಗಿಲಿಗೆ ಬಂದು ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಕರಾವಳಿ ಬೈಪಾಸ್‌ಗೆ ಬಂದು ಬನ್ನಂಜೆ ಮಾರ್ಗವಾಗಿ ಎಸ್ಪಿ ಕಚೇರಿ, ಕಿನ್ನಿಮೂಲ್ಕಿ, ಬಿಗ್‌ಬಜಾರ್‌ನಿಂದ ಕೆ.ವಿ.ಮಾರ್ಗದ ಮೂಲಕ ಸಾಗಿ ಹೊಟೇಲ್ ಕಿದಿಯೂರು ಎದುರಿನಿಂದ ಸಾಗಿ ಮಲ್ಪೆ-ಮಣಿಪಾಲ ಮಾರ್ಗದಲ್ಲಿ ಕಲ್ಸಂಕ, ಎಂಜಿಎಂ ಹಾದು ಮಣಿಪಾಲ ತಲುಪಬೇಕಾಗಿದೆ.

ಫೆ.17ರ ಮುಂಜಾನೆ ಆರು ಗಂಟೆಗೆ ಓಟಕ್ಕೆ ಐಸಿಐಸಿಐ ದಕ್ಷಿಣ ಮುಖ್ಯಸ್ಥ ವಿರಾಲ್ ರೂಪಾಣಿ ಹಸಿರು ನಿಶಾನೆ ತೋರಿಸಲಿದ್ದಾರೆ. ಇದರೊಂದಿಗೆ ನಡೆಯುವ ಮೂರು ಇತರ ರೇಸ್‌ಗಳಿಗೂ- 10ಕಿ.ಮೀ, 5ಕಿ.ಮೀ., 3ಕಿ.ಮೀ.- 15 ನಿಮಿಷಗಳ ಅಂತರದಲ್ಲಿ ಹಸಿರುನಿಶಾನೆ ತೋರಿಸಲಾಗುತ್ತದೆ. ವಿಜೇತರಿಗೆ ಬಹುಮಾನ ವಿತರಣೆ ಬೆಳಗ್ಗೆ 8:30ಕ್ಕೆ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆಯಲಿದೆ ಎಂದು ಡಾ.ವಿನೋದ್ ನಾಯಕ್ ತಿಳಿಸಿದರು.

ಸಮಾರಂಭದಲ್ಲಿ ಮಾಹೆಯ ಸಹಕುಲಪತಿ ಡಾ.ಎಚ್.ಎಸ್.ಬಲ್ಲಾಳ್, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಎಸ್ಪಿ ಲಕ್ಷ್ಮಣ ಬಿ.ನಿಂಬರಗಿ, ಕುಂದಾಪುರದ ಡಿಎಫ್‌ಓ ಎಸ್.ಪ್ರಭಾಕರನ್ ಮುಂತಾದವರು ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್‌ನ ಪದಾಧಿಕಾರಿಗಳಾದ ದಿನೇಶ್ ಡಿ.ಕೋಟ್ಯಾನ್, ಬಾಲಕೃಷ್ಣ ಹೆಗ್ಡೆ, ಡಾ.ದೀಪಕ್‌ರಾಮ್ ಬಾಯರಿ, ಡಾ.ಶೋಭಾ, ದಿನೇಶ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News