ಜಾನುವಾರು ವ್ಯಾಪಾರಿಯ ಗುಂಡಿಕ್ಕಿ ಹತ್ಯೆ
Update: 2019-02-15 15:57 GMT
ಪಾಟ್ನ, ಫೆ.15: ಜಾನುವಾರಿ ವ್ಯಾಪಾರಿಯೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದು ಅವರ ಬಳಿಯಿದ್ದ ಹಣವನ್ನು ದುಷ್ಕರ್ಮಿಗಳು ಲೂಟಿ ಮಾಡಿರುವ ಘಟನೆ ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮುಹಮ್ಮದ್ ಮುಮ್ತಾಝ್ ಮೃತ ವ್ಯಕ್ತಿ. ಮುಮ್ತಾಝ್ ಗುರುವಾರ ಬಚ್ವಾರಾ ಎಂಬ ಗ್ರಾಮದಿಂದ ಜಾನುವಾರು ಖರೀದಿಸಿ ಸ್ನೇಹಿತನೊಂದಿಗೆ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಅವರನ್ನು ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದ ಮೂವರು ಅಡ್ಡಗಟ್ಟಿ ಹಣ ನೀಡುವಂತೆ ಬೆದರಿಸಿದ್ದಾರೆ.
ಮುಮ್ತಾಝ್ ಹಣ ಕೊಡಲು ನಿರಾಕರಿಸಿದಾಗ ತಮ್ಮಲ್ಲಿದ್ದ ಪಿಸ್ತೂಲ್ನಿಂದ ಗುಂಡು ಹಾರಿಸಿ ಹತ್ಯೆಗೈದು ಅವರ ಬಳಿಯಿದ್ದ 5 ಲಕ್ಷ ರೂ. ಹಣವನ್ನು ಕಿತ್ತುಕೊಂಡಿದ್ದಾರೆ. ಈ ಸಂದರ್ಭ ಅಲ್ಲಿಂದ ತಪ್ಪಿಸಿಕೊಂಡ ಸ್ನೇಹಿತ ಸಹಾಯಕ್ಕೆ ಕಿರುಚಾಡಿದಾಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.