ಮದುವೆ ಸಮಾರಂಭದಲ್ಲಿ ಮೋದಿ ಪರ ಪ್ರಚಾರ!

Update: 2019-02-16 07:45 GMT

ಮಂಗಳೂರು, ಫೆ.16: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ರಾಜಕೀಯ ಪಕ್ಷಗಳಲ್ಲಿ ಸೇರಿದಂತೆ ಎಲ್ಲೆಡೆ ಬಿರುಸಿನ ಚಟುವಟಿಕೆಗಳು ಈಗಾಗಲೇ ಆರಂಭಗೊಂಡಿವೆ. ಇದಕ್ಕೆ ಮದುವೆ ಸಮಾರಂಭಗಳು ಹೊರತಾಗಿಲ್ಲ ಎಂಬುದಕ್ಕೆ ಶುಕ್ರವಾರ ನಗರದಲ್ಲಿ ನಡೆದ ವಿವಾಹವೊಂದು ಸಾಕ್ಷಿಯಾಯಿತು.

ಮಂಗಳೂರು ನಗರ ನಿವಾಸಿ ತುಕಾರಾಮ್ ಕಾಮತ್ ಎಂಬವರ ಪುತ್ರಿ ಲಕ್ಷ್ಮೀ ಹಾಗೂ ವಸಂತ್ ಪೈ ಎಂಬವರ ಪುತ್ರ ವಿಶ್ವಾಸ್ ಅವರ ಮದುವೆ ಶುಕ್ರವಾರ ನಗರದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಮಾಡಲಾದ ಪ್ರಚಾರ ವೈಖರಿ ಎಲ್ಲರ ಗಮನಸೆಳೆದವು.

‘ಮದುವೆ ಉಡುಗೊರೆಯಾಗಿ ಮೋದಿಯವರನ್ನು ಪುನಃ ಪ್ರಧಾನಿಯನ್ನಾಗಿ ಮಾಡಿ’ ಎನ್ನುವ ಕೋರಿಕೆ, ‘ದಂಪತಿಯ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸೋಣ.. ದೇಶದ ಉಜ್ವಲ ಭವಿಷ್ಯಕ್ಕಾಗಿ ಮೋದಿಗೆ ಮತ ಹಾಕೋಣ’ ಎಂಬ ವಾಕ್ಯಗಳುಳ್ಳ ಪ್ರಧಾನಿಯ ಭಾವಚಿತ್ರವಿರುವ ಬ್ಯಾನರ್‌ಗಳನ್ನು ವಿವಾಹ ವೇದಿಕೆಯ ಮುಂಭಾಗದಲ್ಲಿ ಹಾಕಲಾಗಿತ್ತು.

ಈ ಮದುವೆಯ ಕರೆಯೋಲೆಯನ್ನು ಪ್ರಧಾನಿ ಮೋದಿಯವರಿಗೆ ಕಳುಹಿಸಲಾಗಿತ್ತು. ಅದಕ್ಕಾಗಿ ಮೋದಿಯವರಿಂದ ಪ್ರೀತಿಯ ಶುಭಾಶಯಗಳು ಮದುಮಗಳ ಮನೆಯವರಿಗೆ ಬಂದಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News