ಪುಲ್ವಾಮ ಪ್ರಕರಣವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ: ಸೀತಾರಾಮ ಯೆಚೂರಿ

Update: 2019-02-16 11:02 GMT

ಕಾಸರಗೋಡು, ಫೆ.16: ಪುಲ್ವಾಮ ಉಗ್ರರ ದಾಳಿಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂದು ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.

ಉಪ್ಪಳದಿಂದ ಹೊರಡಲಿರುವ ಎಲ್.ಡಿ.ಎಫ್ ನೇತೃತ್ವದ ಜನಸಂರಕ್ಷಣಾ ಯಾತ್ರೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಕಾಸರಗೋಡಿಗೆ ಆಗಮಿಸಿದ ಅವರು ಮಂಜೇಶ್ವರ ಸರಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಯಾವುದೇ ಮೈತ್ರಿ ಇಲ್ಲ. ಬಿಜೆಪಿ ಮತ್ತು ಟಿಎಂಸಿ ಪಕ್ಷವನ್ನು ಸೋಲಿಸುವುದೇ ಸಿಪಿಎಂ ಗುರಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಎಡಪಕ್ಷ ಶಕ್ತಿಯಾಗಿ ಹೊರಹೊಮ್ಮಲಿದೆ. 2004ರ ಫಲಿತಾಂಶ ಪುನರಾವರ್ತನೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪುರುಷ ಮಹಿಳೆ ಸಮಾನತೆ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ಶಬರಿಮಲೆ ದೇವಳಕ್ಕೆ ಮಹಿಳೆಯವರ ಪ್ರವೇಶಕ್ಕೆ ಯಾಕೆ ಅಡ್ಡಿಯಾಗುತ್ತಿದೆ ಎಂದು ಪ್ರಶ್ನಿಸಿದ ಯೆಚೂರಿ, ತ್ರಿವಳಿ ತಲಾಕ್ ಮಸೂದೆ ಜಾರಿ ಮಾಡುವಾಗ ಮಹಿಳೆ ಪುರುಷರು ಸಮಾನರು ಎಂದು ಹೇಳುವ ಬಿಜೆಪಿ, ಶಬರಿಮಲೆ ವಿಷಯದಲ್ಲಿ ದ್ವಂದ್ವ ನಿಲುವು ತಳೆಯುತ್ತಿದೆ. ಮತ ಗಳಿಸಲು ಇಂತಹ ವಿಷಯವನ್ನು ಅದು ರಾಜಕೀಯಗೊಳಿಸುತ್ತಿದೆ ಎಂದು ಹೇಳಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News