ನಟ ಪುನೀತ್ ರಾಜ್‌ಕುಮಾರ್ ಉಡುಪಿ ಶ್ರೀಕೃಷ್ಣಮಠ ಭೇಟಿ

Update: 2019-02-16 13:09 GMT

ಉಡುಪಿ, ಫೆ.16: ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ ಇಂದು ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು.

ಮಠದಲ್ಲಿ ಪರ್ಯಾಯ ಸ್ವಾಮೀಜಿ ಯೋಜಿಸಿರುವ ಸುವರ್ಣ ಗೋಪುರದ ಮಾದರಿಯನ್ನು ದೀಪ ಬೆಳಗಿಸಿ ಹುಂಡಿಗೆ ಚಿನ್ನದ ಕಾಣಿಕೆಯನ್ನು ಹಾಕುವುದರ ಮೂಲಕ ಉದ್ಘಾಟಿಸಿದರು. ಚಿನ್ನದ ತಗಡನ್ನು ಮಾಡಲು ರಾಜಕೋಟ್ನಿಂದ ತರಿಸಿದ ನೂತನ ರೋಲಿಂಗ್ ಯಂತ್ರವನ್ನು ಸ್ವಿಚ್ ಹಾಕುವುದರೊಂದಿಗೆ ಚಾಲನೆ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಯೊಧರನ್ನು ಕಳೆದುಕೊಂಡ ದಿನ ನಮಗೆಲ್ಲಾ ಕತ್ತಲೆಯ ದಿನವಾಗಿದೆ. ಯೋಧರು ನಮಗಾಗಿ ಗಡಿಭಾಗದಲ್ಲಿ ಕಷ್ಟಪಡುತ್ತಾರೆ. ಯೋಧರ ಬಗ್ಗೆ ನಾವು ಏನು ಮಾತಾಡಿದರೂ ಕಡಿಮೆಯೇ. ಈ ದಾಳಿಯಲ್ಲಿ ನಮ್ಮ ಮಂಡ್ಯದ ಹೆಮ್ಮೆಯ ಯೋಧನನ್ನು ಕೂಡ ನಾವು ಕಳೆದುಕೊಂಡಿದ್ದೇವೆ. ಇಂತಹ ಸಂದರ್ಭ ದಲ್ಲಿ ಸರಕಾರ ಏನು ಮಾಡುತ್ತದೆ ಎಂಬುದಕ್ಕಿಂತ ನಾವು ಈ ದೇಶಕ್ಕೆ ಏನು ಮಾಡುತ್ತೇವೆ ಎಂಬುದು ಮುಖ್ಯ ಎಂದರು.

ಈ ಹಿಂದೆ ಅಪ್ಪಾಜಿ ಜೊತೆ ಕೃಷ್ಣ ಮಠಕ್ಕೆ ಭೇಟಿ ನೀಡಿರುವುದನ್ನು ನೆನಪಿಸಿದ ಪುನೀತ್, ಅಪ್ಪಾಜಿ ಜೊತೆ ಹಲವು ಬಾರಿ ಕೃಷ್ಣಮಠಕ್ಕೆ ಭೇಟಿ ನೀಡಿದ್ದೇನೆ. ಆ ದಿನಗಳು ಯಾವತ್ತಿಗೂ ಮೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಂಬೈಯ ಉದ್ಯಮಿ ಆದರ್ಶ ಶೆಟ್ಟಿ, ನಟರ ಆಪ್ತ ಕಾರ್ಯದರ್ಶಿ ನೀಲಕಂಠ ವೀರಾಸ್ವಾಮಿ, ಪರ್ಯಾಯ ಮಠದ ಮ್ಯಾನೇಜರ್ ವೆಂಕಟರಮಣ ಆಚಾರ್ಯ, ಪಿಆರ್‌ಓ ಶ್ರೀಶ ಭಟ್ ಕಡೆಕಾರ್, ಸುವರ್ಣ ಗೋಪುರದ ಕೆಲಸದ ಉಸ್ತುವಾರಿಗಳಾದ ಸಚ್ಚಿದಾನಂದ ರಾವ್, ವೆಂಕಟೇಶ್ ಶೇಟ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News