ಫೆ.23ರಂದು ಬೀದಿನಾಯಿಗಳ ಕುರಿತ ಜಾಗೃತಿ ಅಭಿಯಾನಕ್ಕೆ ಚಾಲನೆ

Update: 2019-02-19 12:39 GMT

ಉಡುಪಿ, ಫೆ.19: ಬೀದಿಯಲ್ಲಿ ಎಸೆಯಲ್ಪಟ್ಟ ನಾಯಿಮರಿಗಳ ಆರೈಕೆ, ಪುನವರ್ಸತಿ ಕಲ್ಪಿಸುವ ನಿಟ್ಟಿನಲ್ಲಿ ಆರಂಭಿಸಲಾದ ಮಲ್ಪೆಯ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್‌ನ ಉದ್ಘಾಟನೆ ಹಾಗೂ ಬೀದಿ ನಾಯಿಗಳ ಕುರಿತ ‘ನಮ್ಮ ಸ್ವಂತ, ನಮ್ಮ ಹೆಮ್ಮೆ’ ಜಾಗೃತಿ ಅಭಿಯಾನವನ್ನು ಫೆ.23ರಂದು ಸಂಜೆ 5:15ಕ್ಕೆ ಮಲ್ಪೆ ಬೀಚ್‌ನಲ್ಲಿ ಆಯೋಜಿಸಲಾಗಿದೆ.

ಅಭಿಯಾನವನ್ನು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಟಿ ಹಾಗೂ ಟ್ರಸ್ಟ್‌ನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಉಡುಪಿ ಪೌರಾಯುಕ್ತ ಆನಂದ ಕಳೋಲಿಕರ್ ಭಾಗವಹಿಸಲಿರು ವರು ಎಂದು ಟ್ರಸ್ಟಿ ಬಬಿತಾ ಮಧ್ವರಾಜ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಪ್ರಯುಕ್ತ ಬೀಚ್‌ನಲ್ಲಿ ಅಪರಾಹ್ನ 3:30ಕ್ಕೆ ನಾಲ್ಕರಿಂದ ಒಂಭತ್ತನೆ ತರಗತಿಯ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಪ್ರದರ್ಶನ, ಸಂಜೆ 4:30ರಿಂದ 7 ಗಂಟೆವರೆಗೆ ಬೀದಿಯಿಂದ ರಕ್ಷಿಸಲ್ಪಟ್ಟ ನಾಯಿಮರಿಗಳ ದತ್ತು ಸ್ವೀಕಾರ ಹಾಗೂ 4:30ರಿಂದ 5:30ರವರೆಗೆ ಬೀದಿ ನಾಯಿಗಳಿಗೆ ನೀರುಣಿಸುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ.

ಮಲ್ಪೆ ಬೀಚ್‌ನಲ್ಲಿ ಪ್ರತಿ ಎರಡನೆ ಮತ್ತು ನಾಲ್ಕನೆ ಶನಿವಾರ ಸಂಜೆ 4:30ರಿಂದ 7ಗಂಟೆಯವರೆಗೆ ಈ ಅಭಿಯಾನವನ್ನು ನಡೆಸಲಾಗುವುದು. ಬೀದಿ ನಾಯಿಗಳ ಕುರಿತ ಜನರ ಮನೋಭಾವನೆಯ ಬದಲಾವಣೆ, ನಾಯಿಗಳ ರಕ್ಷಣೆ, ಭದ್ರತೆ, ಸುರಕ್ಷತೆ, ಆರೋಗ್ಯ ಈ ಅಭಿಯಾನದ ಮುಖ್ಯ ಗುರಿಯಾಗಿದೆ ಎಂದು ಅವರು ಹೇಳಿದರು.

ಪ್ರಾಣಿದಯೆ, ಬೀದಿನಾಯಿಗಳ ಮೇಲಿನ ಪ್ರೀತಿ, ನಿರ್ವಹಣೆ, ಅನಾಥ ಪ್ರಾಣಿಗಳ ಕಾನೂನುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗು ವುದು. ಸ್ವಯಂ ಸೇವಕರಿಗೆ ಸದಸ್ಯತ್ವ ನೀಡುವುದು, ಬೀದಿ ನಾಯಿಗಳಿಗೆ ಆಹಾರ ಮತ್ತು ನೀರು ಕೊಡುವುದು, ಪ್ರಥಮ ಚಿಕಿತ್ಸೆ ಹಾಗೂ ರಕ್ಷಣೆ ಕುರಿತು ತರಬೇತಿ ನೀಡುವ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗುವುದು ಎಂದರು.

ಟ್ರಸ್ಟ್ ಮೂಲಕ ಬೀದಿಯಲ್ಲಿ ಎಸೆಯಲ್ಪಟ್ಟ ನಾಯಿಮರಿಗಳಿಗೆ ಭಾವನಾತ್ಮಕ ಬೆಂಬಲ, ಆರೋಗ್ಯದ ಆರೈಕೆ, ಆಹಾರ, ಪುನವರ್ಸತಿ ಕಲ್ಪಿಸಲಾಗುವುದು. ಅನಾರೋಗ್ಯ ಪೀಡಿತ ಬೀದಿ ನಾಯಿಗಳಿಗೆ ಪುನವರ್ಸತಿ ಒದಗಿಸಲಾಗುವುದು. ಸಮಾಜದಲ್ಲಿ ಜಾಗೃತಿ ಮತ್ತು ಬೀದಿನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಲ್ಕಾ, ಸುಭಾಶ್ ಭಟ್, ರಶ್ಮಿ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News