ಅಲೋಶಿಯಸ್ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಅಂತರ್ ಕಾಲೇಜು ಹಬ್ಬ ಉದ್ಘಾಟನೆ
ಮಂಗಳೂರು, ಫೆ.22: ಸಂತ ಅಲೋಶಿಯಸ್ ಸ್ವಾಯತತಿ ಕಾಲೇಜಿನ ರಸಾಯನ ಶಾಸ್ತ್ರ ಸಂಘ ಮತ್ತು ಸಂತ ಅಲೋಶಿಯಸ್ ರಸಾಯನ ಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದೊಂದಿಗೆ ರಾಷ್ಟ್ರಮಟ್ಟದ ಅಂತರ್ ಕಾಲೇಜು ಹಬ್ಬ- ಅನಾಲಿಸ್ಟ್ 2ಕೆ19 ಶುಕ್ರವಾರ ಕಾಲೇಜಿನ ಎಲ್ಎಫ್ ರಸ್ಕಿನ್ಹ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.
ಬೆಂಗಳೂರಿನ ಸಿಂಜಿನ್ ಇಂಟರ್ ನ್ಯಾಶನಲ್ನ ಕಮರ್ಶಿಯಲ್ ಮ್ಯಾನ್ಯುಫ್ಯಾಕ್ಚರಿಂಗ್ ಘಟಕದ ಮುಖ್ಯಸ್ಥರಾಗಿರುವ ರಂಗ ರಾವ್ ಅವರು ಈ ಕಾರ್ಯಕ್ರಮ ಉದ್ಘಾಟಿಸಿದರು.
ಅವರು ಮಾತನಾಡಿ, ದೈನಂದಿನ ಬದುಕಿನಲ್ಲಿ ರಸಾಯನಶಾಸ್ತ್ರದ ಪ್ರಾಮುಖ್ಯತೆಯನ್ನು ವಿವರಿಸಿದರು. ಜೊತೆಗೆ ರಸಾಯನ ಶಾಸ್ತ್ರದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಹಾಗೂ ಜ್ಞಾನವನ್ನು ಪ್ರಕಟಪಡಿಸಲು ವೇದಿಕೆಯನ್ನು ಕಲ್ಪಿಸಿಕೊಟ್ಟ ಕಾಲೇಜಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಪ್ರವೀಣ್ ಮಾರ್ಟಿಸ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರೋನಾಲ್ಡ್ ನಝರತ್, ಎಲ್ಸಿ ಆರ್ಐ ನ ನಿರ್ದೇಶಕರಾದ ಡಾ. ರಿಚರ್ಡ್ ಗೊನ್ಸಾಲ್ವಿಸ್, ಅಲ್ ಕೆಮಿ ಸಂಘದ ಅಧ್ಯಕ್ಷರಾದ ಡಾ. ದಿವ್ಯಾ ಎನ್. ಶೆಟ್ಟಿ, ವಿದ್ಯಾರ್ಥಿ ಸಂಚಾಲಕರಾದ ಕುಮಾರಿ ಫ್ಲೊರೆನ್ಸ್ ಹೇಝಿಲ್ ಮತ್ತು ಸಹಾಯಕ ಸಂಚಾಲಕರಾದ ಅಪೂರ್ವ ಉಪಸ್ಥಿತರಿದ್ದರು.
ಗುಜರಾತ್, ಗೋವಾ, ಕೇರಳ, ಮೈಸೂರು ಮತ್ತು ಬೆಂಗಳೂರು ಸೇರಿದಂತೆ ಒಟ್ಟು 35 ಕಾಲೇಜುಗಳ ವಿದ್ಯಾರ್ಥಿಗಳು ಐಸ್ ಬ್ರೇಕರ್, ವಿಚಾರಸಂಕಿರಣ, ರಸಪ್ರಶ್ನೆ, ವೀಡಿಯೋ ಚಮತ್ಕಾರ, ರಂಗೋಲಿ, ಸಾಕ್ಷ್ಯಚಿತ್ರ ನಿರ್ಮಾಣ, ಕೊಲಾಜ್, ಮುಖವರ್ಣಿಕೆ, ತಾರಾ ವಿಶ್ಲೇಷಕ - ಮೊದಲಾದ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.