ಇಲಾಖೆಗಳ ಸಮನ್ವಯದಿಂದ ವಿಕಲಚೇತನರ ಅಭಿವೃದ್ಧಿ: ಬಸವರಾಜು

Update: 2019-02-22 17:49 GMT

ಮಂಗಳೂರು, ಫೆ. 22: ದ.ಕ.ಜಿಲ್ಲೆಯಲ್ಲಿ ವಿಕಲಚೇತನರು ಅದರಲ್ಲೂ ಎಂಡೋಸಲ್ಫಾನ್ ಪೀಡಿತರಿಗಾಗಿ ಪುನರ್ವಸತಿಯ ಪರಿಕಲ್ಪನೆಯಲ್ಲಿ ಇನ್ನೊಂದು ಹಂತಕ್ಕೆ ಏರುವ ಅಗತ್ಯವಿದೆ ಎಂದು ವಿಕಲಚೇತನ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತ ಎಸ್. ಬಸವರಾಜು ಅಭಿಪ್ರಾಯಪಟ್ಟರು.

2016ರ ವಿಕಲಚೇತನ ಹಕ್ಕುಗಳ ಅಧಿನಿಯಮದ ಬಗ್ಗೆ ಅರಿವು ಮೂಡಿಸುವುದು ಹಾಗೂ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ಕುರಿತು ಶುಕ್ರವಾರ ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ವಿಕಲಚೇತನರನ್ನು ಕಟ್ಟಕಡೆಯ ವರ್ಗದ ಜನತೆಯನ್ನಾಗಿ ಪರಿಗಣಿಸಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ವಿಕಲಚೇತನರ ಸಮಸ್ಯೆಗಳನ್ನು ಅರಿತು ತುರ್ತಾಗಿ ಸ್ಪಂದಿಸುವುದು ಮತ್ತು ಅವರ ಬೆಳವಣಿಗೆಯನ್ನು ಬೆಂಬಲಿಸುವ ಅಗತ್ಯವಿದೆ. ಗುರುವಾರ ಬೆಳ್ತಂಗಡಿಯಲ್ಲಿ ಎಂಡೋಸಲ್ಫಾನ್ ಪೀಡಿತರ ಪರಿಸ್ಥಿತಿಯನ್ನು ನೇರ ಭೇಟಿಯ ಮುಖಾಂತರ ಅರಿತಿದ್ದು, ಶುಶ್ರೂಷೆಯ ಜೊತೆಗೆ ಅವರ ಪುನರ್ವಸತಿ ಹಾಗೂ ಕೌಶಲ್ಯ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕಾಗಿದೆ. ಸಬಲೀಕರಣ, ಶಿಕ್ಷಣ ಹಾಗೂ ಉತ್ಪಾದಕತೆಯ ದೃಷ್ಟಿಯಲ್ಲಿರಿಸಿ ಅವರ ಅಭಿವೃದ್ಧಿಗೆ ಮಾನದಂಡಗಳನ್ನು ರಚಿಸಲು ಬಸವರಾಜ್ ಅಧಿಕಾರಿಗಳಿಗೆ ಸೂಚಿಸಿದರು.

ವಿಕಲಚೇತನರ ನ್ಯೂನ್ಯತೆಯನ್ನು ಪರಿಗಣಿಸದೆ ಸರ್ವಾಂಗೀಣ ದೃಷ್ಟಿಯನ್ನಿರಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಒತ್ತನ್ನು ನೀಡಬೇಕಿದೆ. ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ ಬಹಳಷ್ಟಿದ್ದು ಅಂತಹವರಿಗೆ ವಿಶೇಷ ಕಾಳಜಿ ವಹಿಸಿ ನೆರವು ನೀಡುವ ಅಗತ್ಯವಿದೆ. ಎಂಡೋಸಲ್ಫಾನ್ ಪೀಡಿತ 18 ವರ್ಷದೊಳಗಿನ ಮಕ್ಕಳಿಗೆ ಅಧಿಕಾರಿಗಳು ಪ್ರತೀ ಮನೆ ಮನೆ ಭೇಟಿ ನೀಡಿ ಶಾಲೆಗೆ ಸೇರಿಸುವ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದರು.

ಎಂಡೋಸಲ್ಫಾನ್ ಪೀಡಿತರ ಶ್ರೇಯೋಭಿವೃದ್ಧಿ ನಿಟ್ಟಿನಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯವು ಸಾಮಾಜಿಕ ಆರ್ಥಿಕ ಅಧ್ಯಯನ ನಡೆಸುವ ಅಗತ್ಯವಿದೆ. ಅಲ್ಲದೆ ವಿಕಲಚೇತನರಿಗೆ ಶಿಕ್ಷಣ, ಹಾಸ್ಟೆಲ್‌ಗಳಲ್ಲಿ ಮೀಸಲಿಡಲಾದ ಸೀಟುಗಳನ್ನು ನೀಡದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಬಸವರಾಜ್ ತಿಳಿಸಿದರು.

ಸಭೆಯಲ್ಲಿ ದ.ಕ. ಜಿಪಂ ಸಿಇಒ ಡಾ. ಸೆಲ್ವಮಣಿ ಆರ್., ಉಪಕಾರ್ಯದರ್ಶಿ ಮಹೇಶ್, ವಿಕಲಚೇತನರ ಕಲ್ಯಾಣಾಧಿಕಾರಿ ಯಮುನಾ ಮತ್ತಿತರರು ಪಾಲ್ಗೊಂಡಿದ್ದರು.

ಮಾಹಿತಿ ನೀಡುತ್ತಿಲ್ಲ: ಎಸ್ಸಿ-ಎಸ್ಟಿಗಳಿಗೆ ಸರಕಾರದಿಂದ ಸಿಗುವ ವಿವಿಧ ಯೋಜನೆಗಳ ಬಗ್ಗೆ ಅಧಿಕಾರಿಗಳು ಸಕಾಲಕ್ಕೆ ಮಾಧ್ಯಮಗಳ ಮೂಲಕ ಮಾಹಿತಿ ನೀಡುತ್ತಾರೆ. ಆದರೆ, ವಿಕಲಚೇತನರ ಕಲ್ಯಾಣಕ್ಕಾಗಿ ಸರಕಾರ ಅನೇಕ ಯೋಜನೆಗಳನ್ನು ಪ್ರಕಟಿಸಿದರೂ ಕೂಡ ಮಾಹಿತಿ ನೀಡುತ್ತಿಲ್ಲ ಎಂದು ವಿಕಲಚೇತನರ ಸಂಘಟನೆಗಳ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಯುಕ್ತರು ಶಿಸ್ತು ಕ್ರಮದ ಎಚ್ಚರಿಕೆ ನೀಡಿದರು.

ಸುಳ್ಳು ಪ್ರಮಾಣಪತ್ರ ಸೃಷ್ಟಿ: ಉಡುಪಿಯಲ್ಲಿ ಸುಮಾರು 60 ಮಂದಿ ಶಿಕ್ಷಕರು ವಿಕಲಚೇತನರ ನಕಲಿ ಪ್ರಮಾಣಪತ್ರ ಸೃಷ್ಟಿಸಿ ಸರಕಾರಿ ಹುದ್ದೆಗೆ ಸೇರಿದ್ದಾರೆ. ಉಡುಪಿ ವಲಯವೊಂದರಲ್ಲೇ 33 ಶಿಕ್ಷಕರು ಈ ರೀತಿ ವಂಚಿಸಿದ ಬಗ್ಗೆ ಮಾಹಿತಿ ಲಭಿಸಿದೆ. ಇದನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿದ್ದು, ವರದಿ ನೀಡುವಂತೆ ಉಡುಪಿ ಡಿಡಿಪಿಐಗೆ ಸೂಚಿಸಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News